ವಿದ್ಯಾರ್ಥಿಗಳೇ ಪರೀಕ್ಷೆಗೆ ಓದುವುದನ್ನು ಆಗಾಗ ಮುಂದೂಡುತ್ತೀರಾ..? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು..
ಪರೀಕ್ಷೆಗಳಿಗೆ ಓದಲು ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಗುತ್ತಿಲ್ಲವೇ, ಗಮನವನ್ನು ಕೇಂದ್ರೀಕರಿಸಿಕೊಳ್ಳಲು ಆಗುತ್ತಿಲ್ಲವೇ ? ಹಾಗಿದ್ರೆ ಈ ಲೇಖನ ನಿಮಗಾಗಿ. ನಿಮಗೆ ಓದಿನ ಹವ್ಯಾಸ ಹೆಚ್ಚಾಗಬೇಕು, ಓದಿದ್ದು ನೆನಪಿನಲ್ಲಿ ಉಳಿಯಬೇಕು, ಪರೀಕ್ಷೆಗಳಿಗೆ ಉತ್ತಮ ತಯಾರಿ ನಡೆಸಬೇಕು .
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2024 ರ ಫೆಬ್ರುವರಿ, ಮಾರ್ಚ್ ನಲ್ಲಿ ನಡೆಯಲಿವೆ. ಅಯ್ಯೋ ಈ ಪರೀಕ್ಷೆಗಳಿಗೆ ಇನ್ನು ಐದು ತಿಂಗಳು ಬಾಕಿ ಇದೆ, ನಾಲ್ಕು ತಿಂಗಳು ತಿಂಗಳು ಬಾಕಿ ಇದೆ ಎಂದು ಪರೀಕ್ಷೆ ತಯಾರಿಯನ್ನು ಇನ್ನೂ ಹಾಗೆಯೇ ಮುಂದೂಡುವ ಚಾಳಿ ನಿಮ್ಮದಾಗಿದ್ದರೆ ಇಂದಿನ ಲೇಖನ ನೀವು ಓದಲೇಬೇಕು.
ಓದಲು ಕೂತರೆ ಬಹುಬೇಗ ಬೋರ್ ಎನಿಸುವುದು ಅಥವಾ ಇನ್ನೂ ಹೆಚ್ಚು ದಿನಗಳಿವೆ ಎಂದು ಬೇಜವಾಬ್ದಾರಿಯಾಗಿ ನಡೆದುಕೊಳ್ಳುವುದು ಬಹುಸಂಖ್ಯಾತ ವಿದ್ಯಾರ್ಥಿಗಳ ಸಾಮಾನ್ಯ ಸ್ವಾಭಾವಗಳಾಗಿವೆ. ಅದರಲ್ಲೂ ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳಿಗೆ ಈ ಓದು ಎನ್ನುವುದು ಕೆಲವೊಮ್ಮೆ ಕಷ್ಟ ಎನಿಸಲುಬಹುದು. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ನಿಮ್ಮ ಓದಿನ ಸ್ಕಿಲ್ ಅನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಫಾಲೋ ಮಾಡಿರಿ.
ಎಸ್ಎಸ್ಎಲ್ಸಿ / ದ್ವಿತೀಯ ಪಿಯುಸಿ ಓದುತ್ತಿರುವವರು ತಮ್ಮ ವಾರ್ಷಿಕ ಪರೀಕ್ಷೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಎರಡು ಹಂತದ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣಕ್ಕೆ ಹೋಗಲು, ಉತ್ತಮ ಕಾಲೇಜುಗಳಲ್ಲಿ ಸೇರಬೇಕು, ಬಯಸಿದ ಕೋರ್ಸ್ ಪಡೆಯಬೇಕು ಎಂದರೆ ಹೆಚ್ಚು ಅಂಕಗಳನ್ನು ಗಳಿಸಬೇಕು. ಆಗ ಮಾತ್ರ ಆರ್ಥಿಕ ಸಮಸ್ಯೆಗಳಿಂದ ದೂರ ಉಳಿಯಬಹುದು. ನಿಮ್ಮ ಗುರಿಗೆ ಅಗತ್ಯವಾದ ಕೋರ್ಸ್ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುವ ಕೆಲವು ಉತ್ತಮ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ. ಇವುಗಳನ್ನು ಆಕ್ಟ್ಫರ್ಡ್ ಶಿಕ್ಷಣ ತಜ್ಞರಾದ Eileen Tracy ರವರು ಅಭಿವೃದ್ಧಿಪಡಿಸಿದ್ದಾರೆ. ಇವುಗಳನ್ನು ಎಸ್ಎಸ್ಎಲ್ಸಿ / ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಯಾವುದೇ ತರಗತಿಯ ವಿದ್ಯಾರ್ಥಿಗಳು ಫಾಲೋ ಮಾಡುವುದರಿಂದ ಓದಿನ ಹವ್ಯಾಸ, ನೆನಪಿನ ಶಕ್ತಿ ಎರಡು ವೃದ್ಧಿಯಾಗಲಿವೆ.
ಪರೀಕ್ಷೆಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೇ, ಶಿಕ್ಷಕರು ಪಾಠ ಮಾಡುವಾಗ ನೋಟ್ಸ್ ಬರೆದುಕೊಳ್ಳುವುದು ಒಂದು ಉತ್ತಮ ಕೌಶಲ. ಆದರೆ ಅದಕ್ಕೆ ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂಬ ಯಾವುದೇ ನಿಯಮಗಳಿಲ್ಲ. ಕೆಲವು ವಿದ್ಯಾರ್ಥಿಗಳು ಸುದೀರ್ಘವಾಗಿ ಒಂದು ಅಂಶಗಳನ್ನು ಬಿಡದಂತೆ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು. ನಿಮಗೆ ನಿರ್ಧಿಷ್ಟ ಪದವನ್ನು ನೋಡಿದಾಗ ಅದರ ಹಿಂದಿನ ಮತ್ತು ಮುಂದಿನ ಎಲ್ಲಾ ವಿಷಯಗಳು ನೆನಪಾಗುವಂತೆ ನೋಟ್ಸ್ ಮಾಡಿಕೊಳ್ಳುವುದು ಉತ್ತಮ ವಿಧಾನವಾಗಿದೆ. ಇಂತಹ ಕಲೆಗಳನ್ನು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕು. ನೀವು ಎಸ್ಎಸ್ಎಲ್ಸಿ / ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಲ್ಲಿ, ನಿಮ್ಮ ನೋಟ್ಸ್ಗಳನ್ನು ಓದಲು ಇಂದಿನಿಂದಲೇ ಆರಂಭಿಸಿ.
ಮೈಂಡ್ಮ್ಯಾಪಿಂಗ್ ಮತ್ತು ಬ್ರೈನ್ಸ್ಟಾರ್ಮಿಂಗ್ ವಿಧಾನಗಳು ಕಲೆ ಮತ್ತು ಮಾನವಿಕ ವಿಭಾಗಗಳ ವಿಷಯಗಳನ್ನು ಪರಿಣಾಮಕಾರಿಯಾಗಿ ಓದಲು ಅನುಕೂಲವಾಗುತ್ತವೆ. ಹಾಗಿದ್ರೆ ಮೈಂಡ್ ಮ್ಯಾಪಿಂಗ್ ಎಂದರೇನು, ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿರಿ.
ಹಲವು ವಿದ್ಯಾರ್ಥಿಗಳಿಗೆ ರಾಸಾಯನಶಾಸ್ತ್ರ, ಜೀವಶಾಸ್ತ್ರ, ಇತಿಹಾಸದಂತಹ ವಿಷಯಗಳಲ್ಲಿ ಎಲ್ಲಾ ಮಾಹಿತಿಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಸಾಧ್ಯ. ಜ್ಞಾಪಕಶಾಸ್ತ್ರದಲ್ಲಿ ಉತ್ತಮ ಮೆಮೊರಿಗಾಗಿ ಹಲವು ಟ್ರಿಕ್ಸ್ಗಳನ್ನು ಬಳಕೆ ಮಾಡಲಾಗುತ್ತದೆ. ಕೆಲವು ವಿಷಯಗಳನ್ನು ನೆನಪಿಸಿಕೊಳ್ಳಲು ಕಲ್ಪನೆಗಳು ಹೇಗಿರಬೇಕು, ಯಾವ ವಸ್ತುಗಳನ್ನು ನೋಡಿದರೆ ಯಾವ ಮಾಹಿತಿ ನೆನಪಿಗೆ ಬರಬೇಕು ಎಂದು ತಿಳಿಸಲಾಗುತ್ತದೆ. ಈ ಮೆಮೊರಿ ಟ್ರಿಕ್ಗಳನ್ನು ಪೋಷಕರು ಮತ್ತು ಶಿಕ್ಷಕರು ಸ್ಟೂಡೆಂಟ್ಸ್ಗಳಿಗೆ ಕಲಿಸಬೇಕು. ಉತ್ತಮ ರೀತಿಯಲ್ಲಿ ಅರ್ಥವಾಗುವಂತೆ ಹೇಳಿಕೊಡಬೇಕು.
ಒಂದು ಪ್ರಬಂಧ ಬರೆಯಲು, ನಿರ್ದಿಷ್ಟ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹಂತ ಹಂತವಾಗಿ ಸೇರಿಸುತ್ತಾ ಪೂರ್ಣಗೊಳಿಸಲಾಗುತ್ತದೆ. ಹಾಗೆ ಪ್ರಬಂಧ ಬರೆಯಲು ಸಮಯವು ಬೇಕು, ಅಭ್ಯಾಸವು ಅಗತ್ಯ. ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವುದನ್ನು ಕಲಿಸಿದಾಗ ಅವರಿಗೆ ಓದುವ ಹವ್ಯಾಸ ಹೆಚ್ಚುತ್ತದೆ. ರಿಸರ್ಚ್ ಮಾಡಿ ಸ್ವಂತ ಕಲಿಯುವ ಆಸಕ್ತಿಯು ವೃದ್ಧಿಗೊಳ್ಳುತ್ತದೆ. ನೆನಪಿನ ಶಕ್ತಿಯೂ ಈ ವಿಷಯಗಳಲ್ಲೆಲ್ಲ ಹೆಚ್ಚುತ್ತದೆ. ಈ ಮೂಲಕ ಪ್ರಬಂಧ ಬರೆಯುವ ಯೋಜನೆಯು ಓದುವ ಕಲೆಯನ್ನು, ಹವ್ಯಾಸವನ್ನು ಹೆಚ್ಚಿಸುತ್ತದೆ.
ವಿದ್ಯಾರ್ಥಿಗಳು ಹೆಚ್ಚಾಗಿ ಎದುರಿಸುವ ಸಮಸ್ಯೆಗಳಲ್ಲಿ ಒಂದು ಟೈಮ್ ಮ್ಯಾನೇಜ್ಮೆಂಟ್ (ಸಮಯ ನಿರ್ವಹಣೆ). ಪರೀಕ್ಷೆಗೆ ಇನ್ನು ನಾಲ್ಕೈದು ತಿಂಗಳು ಇವೆ ಎಂದು ತಯಾರಿಯನ್ನು ಮುಂದದೂಡುವುದು ತೀರಾ ದಡ್ಡತನ. ಪ್ರತಿದಿನ ಎಷ್ಟು ಓದಿದರೆ, ಯಾವಾಗ ಪಠ್ಯಕ್ರಮ ಮುಗಿಸಬಹುದು, ಪುನರಾವರ್ತನೆಗೆ ಎಷ್ಟು ಸಮಯ ಇಡಬೇಕು ಎಂಬುದು ವಿದ್ಯಾರ್ಥಿಗಳಿಗೆ ಮೊದಲೇ ಇರಬೇಕಾದ ಪ್ಲಾನ್ ಇದು. ಹಾಗೆ ಪ್ರತಿ ವಿಷಯಗಳನ್ನು ಓದಲು ಸಮಯವನ್ನು ನಿಗದಿಪಡಿಸಿಕೊಳ್ಳಬೇಕಾಗಿರುವುದು ಅಗತ್ಯ. ಈ ರೀತಿ ಗುರಿಯಿಟ್ಟುಕೊಂಡು ಓದಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುವುದು. ಹಾಗೆಯೇ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ತಾಳ್ಮೆ ಎರಡು ರೂಢಿಯಾಗುವುದು. ಆದ್ದರಿಂದ ಪ್ರತಿ ವಿದ್ಯಾರ್ಥಿಯು ತನ್ನ ಹಲವು ಆಸಕ್ತಿಗಳನ್ನು ಪೂರೈಸಲು ಬೇಕಾದ ಸಮಯ ನಿರ್ವಹಣೆಯನ್ನು ತಾನೆ ಸಿದ್ಧಪಡಿಸಿಕೊಳ್ಳಬೇಕು. ಈ ಸಮಯ ನಿರ್ವಹಣೆಗೆ ಪೋಷಕರು ಮತ್ತು ಶಿಕ್ಷಕರಲ್ಲಿ ಸಲಹೆ ಕೇಳಿಯಾದರೂ ಉತ್ತಮ ಟೈಮ್ ಮ್ಯಾನೇಜ್ಮೆಂಟ್ ಮಾಡುವುದು ಸೂಕ್ತ.
No comments:
Post a Comment