SSLC ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚು ಅಂಕ ಗಳಿಸಲು ಈ ಸಲಹೆಗಳನ್ನು ಫಾಲೋ ಮಾಡಿ..!
ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಎಕ್ಸಾಮ್ ಮುಂದಿನ ಮಾರ್ಚ್ ತಿಂಗಳಾಂತ್ಯದಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಆಸೆ ಇದ್ದವರು, ಈ ಸಲಹೆಗಳನ್ನು ಫಾಲೋ ಮಾಡಿರಿ.
ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಎಕ್ಸಾಮ್ಗೆ ಇನ್ನು 5 ತಿಂಗಳು ಮಾತ್ರವೇ ಬಾಕಿ ಇವೆ. ದಿನಗಳು ಹೋಗುವುದು ವಿದ್ಯಾರ್ಥಿಗಳಿಗೆ ಆಗಲಿ, ಪೋಷಕರಿಗೆ ಆಗಲಿ ಅಷ್ಟು ಗಮನಕ್ಕೆ ಬರುವುದಿಲ್ಲ. ಆದರೆ ಪರೀಕ್ಷೆಗೆ ಇನ್ನೆರಡು ತಿಂಗಳು ಮಾತ್ರವೇ ಇರುವುದು ಎಂದಾಗ ಬಹುಸಂಖ್ಯಾತ ವಿದ್ಯಾರ್ಥಿಗಳು, ಎಚ್ಚೆತ್ತುಕೊಳ್ಳುವುದು ಸರ್ವೇ ಸಾಮಾನ್ಯ. ಅದರೆ ನಮ್ಮ ಇಂದಿನ ಲೇಖನದಿಂದ ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆ ತಯಾರಿಗೆ ಎಚ್ಚೆತ್ತುಕೊಳ್ಳುವಲ್ಲಿ ಸಂಶಯವಿಲ್ಲ ಎಂದು ಭಾವಿಸುತ್ತೇವೆ. ನೀವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಲೇಬೇಕು ಎಂದುಕೊಂಡಲ್ಲಿ ತಯಾರಿಯ ವಿಧಾನದಲ್ಲಿಯೂ ಗಮನಹರಿಸಬೇಕಾಗುತ್ತದೆ. ಸಮಯ ನಿರ್ವಹಣೆಯಲ್ಲಿಯೂ ಗಮನಹರಿಸಬೇಕಾಗುತ್ತದೆ. ಆದ್ದರಿಂದ ನೀವು ಟಾಪ್ ಅಂಕಗಳನ್ನು ಗಳಿಸಲು ಇಂದಿನ ಲೇಖನದ ಸಲಹೆಗಳನ್ನು ಫಾಲೋ ಮಾಡಿರಿ.
ಈಗಾಗಲೇ ಎಸ್ಎಸ್ಎಲ್ಸಿ ತರಗತಿ ಬೋಧನೆಗೆ ಅರ್ಧವರ್ಷ ಕಳೆದಿದೆ. ಇಷ್ಟು ದಿನ ನೀವು ಪಡೆದ ಬೋಧನೆಯಲ್ಲಿ ಏನೆಲ್ಲ ಪಠ್ಯಕ್ರಮ (ಅಧ್ಯಾಯಗಳು, ಪದ್ಯಗಳು) ಇದೆ ಎಂದು ನೆನೆಸಿಕೊಂಡಲ್ಲಿ, ಎಷ್ಟೋ ವಿಷಯಗಳು ಮರೆತಿರಬಹುದು. ಆದ್ದರಿಂದ ಒಮ್ಮೆ ಎಲ್ಲ ವಿಷಯಗಳ ಪಠ್ಯಕ್ರಮಗಳನ್ನು ಆಗಾಗ ಓದಿಕೊಳ್ಳಿ. ನೀವು ಆ ಅಧ್ಯಾಯಗಳ ಹೆಸರಿನ ಮೇಲೆ ಕಣ್ಣಾಡಿಸಿದಾಗಲೆಲ್ಲ, ಆ ಪಠ್ಯದ ಬೋಧನೆ, ವಿಷಯಗಳೆಲ್ಲ ಒಮ್ಮೆ ನಿಮಗೆ ನೆನಪಿಗೆ ಬರಬೇಕು. ಆಗ ಮಾತ್ರ ನಿಮ್ಮ ಅಧ್ಯಯನ, ಓದು ಪರಿಣಾಮಕಾರಿಯಾಗಿದೆ ಎಂದರ್ಥ. ಒಂದು ವೇಳೆ ನೆನಪಿಗೆ ಬರದಲ್ಲಿ ಸರಿಯಾಗಿ ಓದಿಕೊಂಡಿಲ್ಲ ಎಂದರ್ಥ.
ಶಿಕ್ಷಕರು ಎಲ್ಲ ಪಠ್ಯಗಳನ್ನು ಪಾಠ ಮಾಡಿ ಮುಗಿಸಲಿ, ಆನಂತರದಲ್ಲಿ ಒಂದು ಕಡೆಯಿಂದ ನೋಟ್ಸ್ ಓದಿಕೊಳ್ಳೋಣ ಎಂದು ಕಾಯದಿರಿ. ಈಗಾಗಲೇ ನೀವು ಕೇಳಿರುವ ಪಾಠಗಳನ್ನು, ಪಡೆದಿರುವ ನೋಟ್ಸ್ಗಳನ್ನು ಓದಲು ಇಂದಿನಿಂದಲೇ ಆರಂಭಿಸಿ. ಪರೀಕ್ಷೆಗೆ ಹೆಚ್ಚು ದಿನಗಳಿವೆ ಎಂದು ತಯಾರಿ ಮುಂದೂಡಬೇಡಿ.
ನೀವು ಕನ್ನಡ ಮಾಧ್ಯಮದಲ್ಲೇ ಓದುವವರಾಗಿರಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲೇ ಓದುವವರಾಗಿರಿ. ಆದರೆ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಓದುವುದು ಸೂಕ್ತ. ಕಾರಣ ಗಣಿತ ಹಾಗೂ ವಿಜ್ಞಾನದಲ್ಲಿ ಲೆಕ್ಕ, ಸೂತ್ರಗಳು, ಸಮೀಕರಣಗಳು, ಬಿಡಿಸಬೇಕಾದ ಸಮಸ್ಯೆಗಳು ತೀರ ಇರುತ್ತವೆ. ಇವುಗಳನ್ನು ಅಭ್ಯಾಸ ಮಾಡದೇ ಸುಮ್ಮನೇ ಓದಿದರೆ ಖಂಡಿತ ನೆನಪಿಗೆ ಬರುವುದಿಲ್ಲ. ಇಂಗ್ಲಿಷ್ನಲ್ಲೂ ಹಾಗೆಯೇ. ನೀವು ಓದುವ ಜತೆಗೆ- ವ್ಯಾಕರಣ, ಲೆಟರ್ ರೈಟಿಂಗ್, ಪ್ಯಾಸೇಜ್, ಇವುಗಳನ್ನು ಬರೆದು ಬರೆದು ಕಲಿಯಬೇಕಾಗಿದೆ. ಅಲ್ಲದೇ ಕರ್ನಾಟಕ ಅಭ್ಯರ್ಥಿಗಳಂತು ಅದರಲ್ಲೂ ಗ್ರಾಮೀಣ ಭಾಗದವರು ಇಂಗ್ಲಿಷ್ ಪದಗಳ ಅರ್ಥಗಳನ್ನು ತಿಳಿದು ಹೆಚ್ಚು ಕಲಿಯಬೇಕಾಗಿರುತ್ತದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ವಿಷಯಗಳಿಗೂ ಸಹ ಗೈಡ್ ಎಂದು ಖರೀದಿಗೆ ಲಭ್ಯವಿದೆ. ಆದರೆ ಮೊದಲು ನೀವು ಹೆಚ್ಚು ಬೋರ್ಡ್ ನಿಗದಿಪಡಿಸಿರುವ ಪಠ್ಯ ಪುಸ್ತಕದ ಮೇಲೆ ಅವಲಂಭಿತರಾಗಿರಬೇಕು. ಅದನ್ನೇ ಹೆಚ್ಚು ಓದಿಕೊಳ್ಳಬೇಕು. ಇದರಲ್ಲಿ ನೀಡುವ ಅಭ್ಯಾಸಗಳನ್ನು ಮಾಡುವುದು ಉತ್ತಮ. ಕರ್ನಾಟಕ ಎಸ್ಎಸ್ಎಲ್ಸಿ ಪಠ್ಯಕ್ರಮದ ಮೇಲೆ ಹೆಚ್ಚು ಗಮನಹರಿಸಿ ಓದಬೇಕು. ಇದರ ಆಧಾರದಲ್ಲಿಯೇ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದನ್ನು ಮರೆಯದಿರಿ.
ಎಷ್ಟು ಸಾಧ್ಯವೋ ಅಷ್ಟು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಬಿಡಿಸುವುದರಿಂದ ನಿಮ್ಮ ನೆನಪಿನ ಶಕ್ತಿ, ನೀವು ಓದಿರುವ ವಿಷಯಗಳು ಎಷ್ಟು ನೆನಪಿದೆ, ಯಾವುದು ಅತಿ ಮುಖ್ಯ ಈ ಎಲ್ಲದಕ್ಕೂ ಉತ್ತರಗಳನ್ನು ಕಂಡುಕೊಳ್ಳಬಹುದಾಗಿದೆ.
ನಿಮ್ಮ ಶಿಕ್ಷಕರು ಹೇಳಿದ ಹಾಗೂ ಪ್ರಶ್ನೆ ಪತ್ರಿಕೆಗಳಿಂದ ತಿಳಿದ ಅತಿ ಮುಖ್ಯ ಟಾಪಿಕ್ಗಳನ್ನು ಹೆಚ್ಚು ಬಾರಿ ಕೇವಲ ಓದುವುದಕ್ಕಿಂತ, ಬರೆದು ಬರೆದು ಕಲಿಯಿರಿ. ಆಗ ಮಾತ್ರ ಬೇಗ ನೆನಪಿಗೆ ಬರುತ್ತದೆ. ಕೇವಲ ಕಂಠಪಾಠಕ್ಕೆ ಸೀಮಿತವಾಗಬೇಡಿ. ಬರೆದು ಕಲಿಯುವುದರಿಂದ ಕೇವಲ ಪರೀಕ್ಷೆಗೆ ಮಾತ್ರವಲ್ಲದೇ ನಂತರವು ಸಹ ನಿಮ್ಮ ನೆನಪಿನಲ್ಲಿ ಈ ವಿಷಯಗಳಿರುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಜ್ಞಾನ ಸಹಾಯವಾಗುತ್ತದೆ.
ಎಸ್ಎಸ್ಎಲ್ಸಿ ಪರೀಕ್ಷೆ ಅಂಕಗಳು ನಿಮ್ಮ ಮುಂದಿನ ವಿದ್ಯಾಭ್ಯಾಸದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಆಯ್ಕೆ ಮಾಡುವ ವಿಷಯದಿಂದ ಹಿಡಿದು ಕಾಲೇಜಿನವರೆಗೆ, ಆರ್ಥಿಕ ವ್ಯವಸ್ಥೆಯ ಮೇಲೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದ ಬಹುಮುಖ್ಯ ಗ್ರೌಂಡ್ವರ್ಕ್ ಎಂದರೆ ಉತ್ತಮ ಪ್ಲಾನ್ ಮಾಡಿ ಓದುವುದಾಗಿದೆ. ಅದರಲ್ಲಿ ಪರೀಕ್ಷೆಗೆ ಒಂದೆರಡು ತಿಂಗಳು ಮುಂಚೆಯೇ ಪಠ್ಯಕ್ರಮದ ಎಲ್ಲ ಅಧ್ಯಾಯಗಳನ್ನು ಓದಿ, ಕಲಿತು ಮುಗಿಸುವುದು. ಈ ಓದಿನ ನಡುವೆ ಶಾಂತವಾಗಿ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಓದಿರಿ. ಜತೆಗೆ ವಿಶ್ರಾಂತಿ ಪಡೆದು ಓದಿರಿ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೀವು ಹೆಚ್ಚು ಅಂಕಗಳಿಸಬೇಕು ಎಂದಲ್ಲಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಬೇಕು ಎಂದಲ್ಲಿ, ಓದುವ ಸ್ಥಳದ ಆಯ್ಕೆಯೂ ಬಹುಮುಖ್ಯ. ಆ ಸ್ಥಳ ನಿಶಬ್ಧವಾಗಿರಲಿ. ನೀವು ಓದುವಾಗ ಯಾರು ಸಹ ಆಗಾಗ ನಿಮ್ಮನ್ನು ಮಾತನಾಡಿಸಿ ತೊಂದರೆ ಕೊಡುವ ಸ್ಥಳ ಇದಾಗಿರಬಾರದು. ಅಲ್ಲದೇ ಓದುವ ಸ್ಥಳದಲ್ಲಿ ಬುಕ್ಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಿ. ಆ ಪ್ರದೇಶಕ್ಕೆ ನೀವು ಸದಾ ಹೋಗಬೇಕು ಎನಿಸುವಷ್ಟು ಪ್ರಶಾಂತ ಸ್ಥಳ, ಶುಚಿಯಾದ ಸ್ಥಳ, ವ್ಯವಸ್ಥಿತ ಸ್ಥಳ ಆದಾಗಿರಲಿ.
ನೀವು ಪರೀಕ್ಷೆ ಬರೆಯಲಿರುವ ಪ್ರತಿ ಪತ್ರಿಕೆಗೆ ಸಮಯ ನಿಗದಿಪಡಿಸಿ. ನಿಮಗೆ ಹೆಚ್ಚು ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಸಮಯ ನಿಗದಿಪಡಿಸಿ ಓದಿರಿ. ಸೂಕ್ತ ಟೈಮ್ ಟೇಬಲ್ ಹಾಕಿಕೊಂಡು ಓದಿರಿ. ಕಷ್ಟ ಎನಿಸುವ ಟಾಪಿಕ್ಗಳನ್ನು, ಅರ್ಥವಾಗದ ಟಾಪಿಕ್ಗಳನ್ನು ಶಿಕ್ಷಕರಲ್ಲಿ, ಸಹಪಾಠಿಗಳಲ್ಲಿ ಕೇಳಿ ತಿಳಿದುಕೊಳ್ಳಿ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳಿಸುವ ನಿಮ್ಮ ಗುರಿಗೆ, ನಿಮ್ಮ ಸ್ವಯಂ ಅಧ್ಯಯನ ಮಾರ್ಗವೇ ಅಂತಿಮ ಪರಿಹಾರ ಹಾಗೂ ಮಾರ್ಗೋಪಾಯಗಳು. ಅಂದರೆ ನಿಮ್ಮ ಅಧ್ಯಯನ ತಂತ್ರಗಾರಿಕೆ, ನೀವು ನೀಡುವ ಸಮಯ, ನೀವು ಓದುವ ವಿಧಾನ, ಇವುಗಳೇ ನಿಮಗೆ ಪರಿಹಾರಗಳು. ಇವು ಬಿಟ್ಟು ಬೇರೆ ಯಾವುದೇ ಸುಲಭ ಮಾರ್ಗ ಹೆಚ್ಚು ಅಂಕಗಳಿಸಲು ಇಲ್ಲ. ಆದ್ದರಿಂದ ಪ್ರತಿ ದಿನವು ಸಹ ನಿಮ್ಮ ಸಣ್ಣ ಸಣ್ಣ ಗುರಿಗಳನ್ನು ತಲುಪಿ, ಉತ್ತಮವಾಗಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗಿದೆ.
ಪರೀಕ್ಷೆಗೆ ಕನಿಷ್ಠ ಇನ್ನೊಂದೆ ತಿಂಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ನೀವು ಓದಿದ, ಕಲಿತ ಎಲ್ಲವನ್ನು ಪುನರಾವರ್ತನೆ ಮಾಡಬೇಕು. ಓದಿದನ್ನು ಪುನರಾವರ್ತನೆ ಮಾಡದಿದ್ದಲ್ಲಿ ಅದೆಷ್ಟೋ ವಿಷಯಗಳು ಮರೆತು ಹೋಗುತ್ತವೆ. ಈ ಸಂದರ್ಭದಲ್ಲಿ ಸಂಶಯಗಳು ಇರುವ ಟಾಪಿಕ್ಗಳು ಸಿಗುತ್ತವೆ. ಅವುಗಳನ್ನು ಸಹ ಕ್ಲಿಯರ್ ಮಾಡಿಕೊಳ್ಳಲು ಈ ಪುನರಾವರ್ತನೆ ಸಹಾಯವಾಗುತ್ತದೆ. ಪುನರಾವರ್ತನೆಗೆ ಸಮಯ ನೀಡುವುದನ್ನು ಯಾರು ಸಹ ಮಿಸ್ ಮಾಡಲೇಬಾರದು.
ಈ ವರ್ಷ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಗೆ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ನಡೆಯಿತು. ಕರ್ನಾಟಕ SSLC ಉತ್ತರ ಕೀಗಳನ್ನು ಏಪ್ರಿಲ್ 17, 2023 ರಂದು ಪ್ರಕಟಿಸಲಾಗಿದೆ. ಕರ್ನಾಟಕ SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21, 2023 ರಂದು ಪ್ರಾರಂಭವಾಯಿತು. ಕೆಳಗಿನ ಎಲ್ಲಾ ಇತ್ತೀಚಿನ ನವೀಕರಣಗಳನ್ನು ಅನುಸರಿಸಿ.
2023, 24ನೇ ಸಾಲಿನ SSLC ಪರೀಕ್ಷೆ 1 ಕ್ಕೆ ರಿಜಿಸ್ಟ್ರೇಷನ್ ಆರಂಭ: ಇಲ್ಲಿವೆ ಮಾರ್ಗಸೂಚಿಗಳು
2023-24ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 1 ಕ್ಕೆ ನೊಂದಣಿ ಆರಂಭವಾಗಿದೆ. ಇದಕ್ಕೆ ಸಂಬಂಧಿತ ಮಾರ್ಗಸೂಚಿ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2024ರ ಮಾರ್ಚ್ ತಿಂಗಳಲ್ಲಿ ನಡೆಸಲಿರುವ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ 1 ಕ್ಕೆ ರಿಜಿಸ್ಟ್ರೇಷನ್ ಆರಂಭಿಸಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಲು ನವೆಂಬರ್ 04 ರವರೆಗೆ ಅವಕಾಶ ನೀಡಿದೆ ಮಂಡಳಿ.
2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಪರೀಕ್ಷೆ-1 ಕ್ಕೆ ಅರ್ಹ ವಿದ್ಯಾರ್ಥಿಗಳು ನೋಂದಣಿ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೆಬ್ಸೈಟ್ ನಲ್ಲಿ ಶಾಲಾ ಲಾಗಿನ್ ಮೂಲಕ ಪಡೆಯಲು ತಿಳಿಸಲಾಗಿದೆ.
ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ, ಮಾನ್ಯತೆ ಪಡೆದಿರುವ ಅನುದಾನಿತ ಮತ್ತು ಖಾಸಗಿ ಶಾಲೆಗಳು ಆಯಾ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಯಾ ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಮಾಹಿತಿ, ಭಾವಚಿತ್ರ, ಸಹಿ ಅಪ್ಲೋಡ್ ಮಾಡಬೇಕಿರುತ್ತದೆ. ಆದ್ದರಿಂದ ಮೊದಲೇ ಈ ಎಲ್ಲಾ ಡಾಟಾ ಸಂಗ್ರಹ ಮಾಡಿಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳ ಬಹುತೇಕ ಮಾಹಿತಿಯನ್ನು SATS ದತ್ತಾಂಶದಿಂದ ಪಡೆಯುತ್ತಿರುವುದರಿಂದ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಲಿಂಗ, ಧರ್ಮ ಮತ್ತು ಮಾಧ್ಯಮ ಇವುಗಳಲ್ಲಿ ಯಾವುದೇ ತಿದ್ದುಪಡಿ ಇದ್ದಲ್ಲಿ ಮಂಡಳಿಯ ಜಾಲತಾಣದಲ್ಲಿ ನೇರವಾಗಿ ತಿದ್ದಲು ಸಾಧ್ಯವಿಲ್ಲ. ಆದ್ದರಿಂದ SATS ಲಾಗಿನ್ನಲ್ಲಿ ಸರಿಪಡಿಸಿ ನಂತರ ಮಂಡಳಿ ಶಾಲಾ ಲಾಗಿನ್ನಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಸಲಹೆ ನೀಡಲಾಗಿದೆ.
ಸದರಿ ಪರೀಕ್ಷೆ ನೋಂದಣಿಗೆ ಸಂಬಂಧಿಸಿದಂತೆ ಪ್ರಸ್ತುತ ಆನ್ಲೈನ್ ಮೂಲಕ ಭರ್ತಿ ಮಾಡಲಾದ ವಿದ್ಯಾರ್ಥಿಗಳ ವಿವರಗಳು ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರಗಳಲ್ಲಿ ನಮೂದಾಗುವುದರಿಂದ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ನಿಗದಿ ದಿನಾಂಕದ ನಂತರ ನೋಂದಣಿ ಮಾಹಿತಿಗಳನ್ನು ಫ್ರೀಜ್ ಮಾಡುವುದರಿಂದ ಅದರ ನಂತರ ವಿದ್ಯಾರ್ಥಿಗಳ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಸೂಚಿಸಲಾಗಿದೆ.
ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್
ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುತ್ತವೆ. ಈ ಪರೀಕ್ಷೆಗೆ ಈ ಬಾರಿ ಎಸ್ಎಸ್ಎಲ್ಸಿ ಓದುತ್ತಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು ಎನ್ನುವ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಟಿಪ್ಸ್ಗಳನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತ ಅಂದರೆ ಅದುವೇ ಎಸ್ಎಸ್ಎಲ್ಸಿ ಬೋರ್ಡ್ ಎಕ್ಸಾಂ. ಈ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಿನ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುತ್ತವೆ. ಈ ಪರೀಕ್ಷೆಗೆ ಈ ಬಾರಿ ಎಸ್ಎಸ್ಎಲ್ಸಿ ಓದುತ್ತಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಅಧ್ಯಯನ ಮಾಡುವುದರಿಂದ ಎಲ್ಲಾ ವಿಷಯಗಳು ಒಮ್ಮೆಲೆ ಅರ್ಥವಾಗುವುದು ಕಷ್ಟವಾಗಬಹುದು. ಅದಕ್ಕೆ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಮತ್ತು ದಿನದ ಪಾಠವನ್ನು ಈಗಿನಿಂದಲೇ ಅಧ್ಯಯನ ಮಾಡಿ. ಹೀಗೆ ಅಧ್ಯಯನ ಮಾಡುವುದರಿಂದ ಮುಂದೆ ವಾರ್ಷಿಕ ಪರೀಕ್ಷೆಗೆ ಅನುಕೂಲವಾಗಲಿದೆ. ಅಂದಿನ ದಿನದ ಪಾಠವನ್ನು ಅಂದೇ ಓದುವುದನ್ನು ಇಂದಿನಿಂದಲೇ ಆರಂಭ ಮಾಡಿ. ಇದು ವಿದ್ಯಾರ್ಥಿಗಳಿಗೆ ಆ ಪಾಠವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಗ್ರಹಿಸಿಕೊಳ್ಳಲು ಅನುಕೂಲವಾಗುತ್ತದೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು ಎನ್ನುವ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಟಿಪ್ಸ್ಗಳನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳು ಮೊದಲು ವಾರ್ಷಿಕ ಪರೀಕ್ಷೆಗೆ ಎಷ್ಟು ದಿನಗಳು ಉಳಿದಿವೆ ಎಂದು ಲೆಕ್ಕ ಹಾಕಿಕೊಳ್ಳಿ. ಆ ದಿನಗಳಲ್ಲಿ ವಿಷಯಗಳನ್ನು ಹಂಚಿಕೊಳ್ಳಿ. ಅವುಗಳಲ್ಲಿ ಸುಲಭವಾದ ವಿಷಯಗಳಿಗೆ ಕಡಿಮೆ ದಿನಗಳನ್ನು , ಹಾಗೂ ಕಷ್ಟಕರ ವಿಷಯಗಳಿಗೆ ಹೆಚ್ಚು ದಿನಗಳನ್ನು ಹೊಂದಿಸಿಕೊಳ್ಳಿ. ಆ ದಿನಗಳಲ್ಲಿ ನೀವು ಅಂದುಕೊಂಡ ವಿಷಯಗಳನ್ನು ಅಧ್ಯಯನ ಮಾಡಿ. ಕಷ್ಟಕರ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡಿ. ಹಾಗೆಂದು ಸುಲಭ ಎನ್ನುವ ವಿಷಯಗಳನ್ನು ಮರೆಯಬೇಡಿ.
ಸರಿಯಾದ ಯೋಜನೆ ಇಲ್ಲದೆ, ಗುರಿಯನ್ನು ತಲುಪುವುದು ಬಹಳ ಸವಾಲಿನ ಕೆಲಸ. ಆದ್ದರಿಂದ ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಸಾಕಷ್ಟು ತಯಾರಿ ಅವಶ್ಯವಾಗಿದೆ. ಅದಕ್ಕಾಗಿ ಸೂಕ್ತವಾದ ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಪರೀಕ್ಷೆಗೆ ಇನ್ನೆಷ್ಟು ದಿನಗಳು ಉಳಿದಿವೆ ಎಂದು ಯೋಚಿಸಿ. ದಿನದ 24 ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. ಆ ಟೈಮ್ ಟೇಬಲ್ನಂತೆ ದಿನಾಲು ಓದುವುದನ್ನು ರೂಡಿಸಿಕೊಳ್ಳಿ. ಓದು, ಬರವಣಿಗೆ ಮತ್ತು ಪುನಾರಾವರ್ತನೆಗೂ ಸಮಯವನ್ನು ಮೀಸಲಿಡಿ. ನೀವು ಹಾಕಿಕೊಂಡಿರುವ ವೇಳಾಪಟ್ಟಿಯನ್ನು ಪ್ರಾಮಾಣಿಕವಾಗಿ ಪಾಲಿಸಿ. ವೇಳಾಪಟ್ಟಿಯನ್ನು ಚಾಚು ತಪ್ಪದೆ ಪಾಲಿಸಿ, ಉತ್ತಮ ಅಂಕಗಳನ್ನು ಪಡೆಯುವ ಕಡೆ ಗಮನ ಹರಿಸಿ.
ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಪ್ರಾಮುಖ್ಯವಾದದು. ಏಕೆಂದರೆ ಇದು ಕೂಡ ಓದಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆ ಉತ್ತಮ. ಬೆಳಗ್ಗೆ ವಾತಾವರಣ ಶುಬ್ರವಾಗಿರುತ್ತದೆ. ಯಾವುದೇ ರೀತಿಯ ಗಲಾಟೆ ಇರುವುದಿಲ್ಲ. ನಿದ್ದೆಗೆಟ್ಟು ಓದಬೇಡಿ, ಇದು ಆರೋಗ್ಯದ ಮೇಲೆ ಪರಿಣಾಮ ಬಿರಬಹುದು. ಸಂಜೆಯ ವೇಳೆಯು ಕೂಡ ಓದಲು ಉತ್ತಮವಾದ ಸಮಯವಾಗಿದೆ.
ವಿದ್ಯಾರ್ಥಿಗಳು ಅಂದಿನ ಪಾಠವನ್ನು ಅಂದೇ ಓದಿದರೆ ಉತ್ತಮ. ಏಕೆಂದರೆ ಪರೀಕ್ಷೆಯ ಸಮಯದಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ. ಎಲ್ಲ ವಿಷಯಗಳನ್ನು ಆಗ ನೀವು ಸುಲಭವಾಗಿ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಶಾಲೆ ಆರಂಭವಾದ ದಿನದಿಂದಲೇ ನಿಯಮಿತವಾಗಿ ಓದಬೇಕು. ಅಂದಿನ ಓದನ್ನು ಅಂದೇ ಓದಿ ಮುಗಿಸಿ. ಪಠ್ಯವನ್ನು ಸರಿಯಾಗಿ ಓದಿ ಮನನ ಮಾಡಿಕೊಳ್ಳಿ.
ಶಾರ್ಟ್ ನೋಟ್ಸ್ ಮಾಡಿಟ್ಟುಕೊಳ್ಳಿ
ಅಂದಿನ ಪಾಠವನ್ನು ಅಂದೇ ಓದುವುವಾಗ ನಿಮಗೆ ಯಾವುದು ಮುಖ್ಯ ಎನಿಸುತ್ತದೆ ಆ ವಿಷಯವನ್ನು ಶಾರ್ಟ್ ನೋಟ್ಸ್ ಮಾಡಿಕೊಳ್ಳಿ. ಯಾವ ವಿಷಯ ನಿಮಗೆ ಕಠಿಣ ಅನಿಸುತ್ತದೆ ಅದನ್ನು ಶಾರ್ಟ್ ನೋಟ್ಸ್ ಮಾಡಿಕೊಂಡು ಓದುವುದನ್ನು ರೂಡಿಸಿಕೊಳ್ಳಿ. ಹೀಗೆ ಶಾರ್ಟ್ ನೋಟ್ಸ್ ಮಾಡಿಕೊಳ್ಳುವುದರಿಂದ ಪರೀಕ್ಷೆ ಸಮಯದಲ್ಲಿ ಅನುಕೂಲವಾಗುತ್ತದೆ. ಅದರ ಜೊತೆಗೆ ನೀವು ಆ ವಿಷಯಗಳನ್ನು ಬರೆಯುವುದರಿಂದ ಆ ವಿಷಯ ನೆನಪಿನಲ್ಲಿ ಉಳಿದುಕೊಳ್ಳುತ್ತದೆ.
ಪ್ರತಿದಿನ ಶಾಲೆಗೆ ಹೋದಾಗ ಶಾಲೆಯಲ್ಲಿ ಏನು ಪಾಠ ಹೇಳುತ್ತಾರೆ, ಏನು ಹೋಂ ವರ್ಕ್ ಕೊಟ್ಟಿರುತ್ತಾರೋ ಅದನ್ನು ಅಂದೇ ಮಾಡಿ ಮುಗಿಸಬೇಕು. ಒಂದು ವೇಳೆ ನಾಳೆ ಮಾಡಿದರಾಯಿತು ಎಂದು ತಾತ್ಸಾರ ಮಾಡಿದರೆ ಖಡಿಂತವಾಗಿಯು ಪರೀಕ್ಷಾ ಸಮಯದಲ್ಲಿ ಕಷ್ಟವಾಗುತ್ತದೆ. ಆದ್ದರಿಂದ ಅಂದಿನ ಕೆಲಸ ಅಂದೇ ಮುಗಿಸಿದರೆ ಉತ್ತಮ. ಇದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ.
ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ನಿಮಗೆ ಪರೀಕ್ಷೆಯ ಮಾದರಿ ಅರ್ಥವಾಗುತ್ತದೆ. ಮತ್ತು ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಒಂದು ಪರಿಕಲ್ಪನೆ ನಿಮಗೆ ತಿಳಿಯುತ್ತದೆ. ಇದು ನಿಮ್ಮ ಓದಿಗೆ ಸಹಾಯಕವಾಗುತ್ತದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ. ಇದರ ಜತೆಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನಿವೇ ಒಂದು ಅಧ್ಯಾಯ ಮುಗಿದ ಮೇಲೆ ಆ ಅಧ್ಯಯನದ ಮೇಲೆ ಪ್ರಶ್ನೆಗಳನ್ನು ತೆಗೆದುಕೊಂಡು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.
ಬೋರ್ಡ್ ಎಕ್ಸಾಂ ಇನ್ನೂ ದೂರವಿದೆ ಎನ್ನುವ ಆಲಸ್ಯತನ ಬೇಡ. ಇನ್ನೂ ಸಮಯವಿದೆ ಮುಂದೆ ಓದಿಕೊಂಡರಾಯಿತು ಎಂದುಕೊಂಡರೆ ಸಮಯ ಸಾಗುತ್ತಲೇ ಇರುತ್ತದೆ. ಒಮ್ಮೆ ಸಮಯ ಹೊದರೆ ಮರಳಿ ಬಾರದು. ಆದ ಕಾರಣ ಇರುವ ಸಮಯದಲ್ಲಿ ಸರಿಯಾದ ವೇಳಾಪಟ್ಟಿಯನ್ನು ರಚಿಸಿಕೊಂಡು ಅಧ್ಯಯನ ಮಾಡಿ, ನಿಮ್ಮ ಗುರಿಯನ್ನು ತಲುಪಿ. ಇಲ್ಲವಾದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲದಂತಾಗುತ್ತದೆ.

No comments:
Post a Comment