ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ; ಮಾರ್ಗಸೂಚಿ ವಿವರ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಸರ್ಕಾರ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಸಮೀಕ್ಷೆಯನ್ನು ನಡೆಸುತ್ತಿದೆ. ರಾಜ್ಯ, ಜಿಲ್ಲಾ, ಶಾಲಾ, ಕ್ಲಸ್ಟರ್, ಬ್ಲಾಕ್ ಹೀಗೆ ವಿವಿಧ ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಹೇಗೆ ನಡೆಸಬೇಕು? ಎಂದು ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಈ ಕುರಿತು ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಕರ್ನಾಟಕ, ಬೆಂಗಳೂರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 2023-24ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವಿಸ್ತ್ರತವಾದ ಹಾಗೂ ಪರಿಣಾಮಕಾರಿ ಸಮೀಕ್ಷೆಯನ್ನು ನಡೆಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ರಾಜ್ಯದಲ್ಲಿ ಆರ್.ಟಿ.ಇ. ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿರಾಗದಂತೆ ಎಲ್ಲಾ ನಾಗರೀಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ಕರೆತರುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಸುತ್ತೋಲೆ ಹೇಳಿದೆ.
ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣದ ಹಿನ್ನೆಲೆಯಲ್ಲಿ ಯಾವುದೇ ಅರ್ಹ ವಯಸ್ಸಿನ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲಾ ಮಕ್ಕಳನ್ನು ಶಿಕ್ಷಣ ವ್ಯಾಪ್ತಿಯಲ್ಲಿರುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಲವಾರು ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 'ಸಮಗ್ರ ಶಿಕ್ಷಣ ಕರ್ನಾಟಕ'ದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ರೀತಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರುವ ಸಲುವಾಗಿ ಮಕ್ಕಳನ್ನು ಗುರುತಿಸಲು ವಿಶೇಷ ಗಣತಿಯನ್ನು ಮಾಡಬೇಕಾಗಿದೆ. ಯಾವುದೇ ಮಗು ಈ ಗಣತಿಯ ವ್ಯಾಪ್ತಿಯಿಂದ ಹೊರಗುಳಿಯದಂತೆ ಗಣತಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದೆ. ವಿಸ್ಕೃತ ಮತ್ತು ಪರಿಣಾಮಕಾರಿಯಾದ ಸಮೀಕ್ಷೆಯನ್ನು ದಿನಾಂಕ 4/11/2023ರ ತನಕ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆ, ತಾಲ್ಲೂಕು, ಕ್ಲಸ್ಟರ್, ಶಾಲೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸುತ್ತೋಲೆಯಲ್ಲಿ ವಿವರಗಳನ್ನು ನೀಡಲಾಗಿದೆ.
ಸುತ್ತೋಲೆಯ ವಿವರಗಳು
* 2023-24ನೇ ಸಾಲಿನಲ್ಲಿ 6 ರಿಂದ 14+ ವಯೋಮಾನದ ಶಾಲೆಗೆ ದಾಖಲಾಗಿ ಶಾಲೆಬಿಟ್ಟ ಮಕ್ಕಳನ್ನು ಗುರುತಿಸಲು ಪ್ರತಿ ಶಾಲಾ ಮುಖ್ಯ ಶಿಕ್ಷಕರು ಶಾಲಾವಾರು ಮಕ್ಕಳ ಪಟ್ಟಿಯನ್ನು ಜಿಲ್ಲಾ ಹಂತದಿಂದ ಪಡೆದುಕೊಳ್ಳುವುದು. ಪ್ರತಿ ಶಾಲಾ ಹಂತದಲ್ಲಿ ತರಗತಿವಾರು ಕಳೆದ ಶೈಕ್ಷಣಿಕ ಸಾಲಿನಲ್ಲಿ 10/04/2023ರಲ್ಲಿದ್ದಂತೆ ದಾಖಲಾಗಿರುವ ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದಲ್ಲಿ ಮಕ್ಕಳ ಪಟ್ಟಿಯನ್ನು ತಯಾರಿಸಿಕೊಂಡು, ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಪರಿಶೀಲಿಸಬೇಕು.
ಈ ಪ್ರಕ್ರಿಯೆಯಲ್ಲಿ ಮರಣ, ವಲಸೆ, ದ್ವಿ-ದಾಖಲಾತಿ ಇತ್ಯಾದಿ ಕಾರಣಗಳಿಂದ ವ್ಯತ್ಯಾಸ ಉಂಟಾದಲ್ಲಿ ಮಕ್ಕಳ ಪಟ್ಟಿಯಿಂದ ತೆಗೆದು ಹಾಕಿ, ಪರಿಷ್ಕೃತ ಪಟ್ಟಿ ಸಿದ್ಧಪಡಿಸಬೇಕು ಮತ್ತು ಈ ಬಗ್ಗೆ ನಿಗದಿತ ನಮೂನೆಯಲ್ಲಿ ಪ್ರತಿ ಮಗುವಿನ ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿಮಾಡಬೇಕು. ಯಾವುದೇ ವ್ಯತ್ಯಾಸ ಇಲ್ಲದಿದ್ದಲ್ಲಿ 'ಶೂನ್ಯ' ವರದಿ ತಮ್ಮ ವ್ಯಾಪ್ತಿಯ ನಮೂನೆಗಳನ್ನು ನೀಡುವುದು.
2023-24ನೇ ಸಾಲಿನಲ್ಲಿ 15 ರಿಂದ 18ನೇ ವಯೋಮಾನದ ಮಕ್ಕಳು 8, 9 ಮತ್ತು 10ನೇ ತರಗತಿಗಳಿಗೆ ದಾಖಲಾಗಿ ವಿವಿಧ ಕಾರಣಗಳಿಂದಾಗಿ ಶಾಲೆಯನ್ನು ತೊರೆದು S.S.L.C/ ಸಮಾನಾಂತರ ಮುಖ್ಯ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ (NIOS) ಮೂಲಕ ಶಿಕ್ಷಣವನ್ನು ಪೂರ್ಣಗೊಳಿಸಲು/ ಮುಂದುವರೆಸಲು ಮತ್ತೊಂದು ಅವಕಾಶ ಕಲ್ಪಿಸಬೇಕಾಗಿರುತ್ತದೆ. ಈ ಸಂಬಂಧ 2024-25ನೇ ಸಾಲಿನ ಜಿಲ್ಲಾ ಹಂತದ ಯೋಜನೆ ಸಿದ್ಧಪಡಿಸುವ ಸಮಯದಲ್ಲಿ ರಾಷ್ಟ್ರೀಯ ಯೋಜನಾ ಮಂಡಳಿಗೆ (PAB) ಪ್ರಸ್ತಾವನೆಯನ್ನು ಸಲ್ಲಿಸಿ ಅನುಮೋದನೆ ಪಡೆಯಬೇಕಾಗಿರುತ್ತದೆ. ಆದ್ದರಿಂದ ಸಮೀಕ್ಷಾ ಸಮಯದಲ್ಲಿ NIOS ಒಳಪಡುವ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿಕೊಳ್ಳುವುದು.
ಶಾಲಾ ಸಮೀಕ್ಷೆಯಲ್ಲಿ (SATS ಆಧಾರಿತ) ದೊರೆತ ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ನಡೆಯುವ ಸ್ಥಳಗಳು, ಮದರಸದಲ್ಲಿ ಅಂದರೆ ಕಟ್ಟಡ ಕಾಮಗಾರಿ ಕಲಿಯುತ್ತಿರುವ ಮಕ್ಕಳು, ಆಸ್ಪತ್ರೆ, ಹೋಟೆಲ್, ಛತ್ರಗಳು, ಚಿತ್ರ ಮಂದಿರಗಳು, ಸಣ್ಣ ಕಾರ್ಖಾನೆಗಳು, ಇಟ್ಟಿಗೆ ತಯಾರಿಸುವ ಸ್ಥಳ, ಮಂಡಕ್ಕಿ ಭಟ್ಟಿಗಳು, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳು, ಎಸ್ಟೇಟ್, ಪ್ಲಾಂಟೇಷನ್, ರಸ್ತೆ ಕಾಮಗಾರಿ, ಗಣಿ ಪ್ರದೇಶ, ಕ್ವಾರಿಗಳು, ಗುಡ್ಡಗಾಡು ಪ್ರದೇಶ, ಬಂಧಿಖಾನೆಗಳು, ಕೊಳಗೇರಿ ಪ್ರದೇಶಗಳಲ್ಲಿ, ಬುಡಕಟ್ಟು ಜನಾಂಗ ಪ್ರದೇಶ (Tribal area), ರೈಲ್ವೆ ಸ್ಟೇಷನ್ಗಳಲ್ಲಿ ಕಾಡು ಪ್ರದೇಶ, ಮೀನುಗಾರಿಕೆ ಪ್ರದೇಶ, ಬಂದರು ಪ್ರದೇಶ, ಐತಿಹಾಸಿಕ ಸ್ಥಳಗಳು, ಗ್ಯಾರೇಜ್ಗಳಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಇನ್ನಿತರೆ ಸ್ಥಳಗಳಲ್ಲಿ ಭೇಟಿ ನೀಡಿ, ಆ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವ ಬಗ್ಗೆ ಪರಿಶೀಲಿಸುವುದು.
ಅರ್ಹ ವಯಸ್ಸಿನ ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ 7 ದಿನಗಳಲ್ಲಿ 1 ದಿನ ವಿಶೇಷ ಆಂದೋಲನೆ (Special Drive) ರೀತಿಯಲ್ಲಿ ಶಾಲೆಗೆ ಸೇರಿ ಬಿಟ್ಟ ಮಕ್ಕಳನ್ನು (Dropout) ಹಾಗೂ ಶಾಲೆಗೆ ದಾಖಲಾಗದೇ ಇರುವ ಮಕ್ಕಳನ್ನು (Never enrolled) ಗಣನೆಗೆ ತೆಗೆದುಕೊಂಡು ಸಂಪೂರ್ಣ ಮಾಹಿತಿಯನ್ನು ಪಡೆಯುವುದು. ಸಮೀಕ್ಷೆ ವೇಳೆಯಲ್ಲಿ 7 ದಿನ ನಿರಂತರ ಗೈರುಹಾಜರಾದ ಮಗುವನ್ನು ಶಾಲೆಯಿಂದ ಹೊರಗುಳಿದ ಮಗು (Dropout) ಎಂದು ಪರಿಗಣಿಸುವುದು. ಅನಂತರ ಮಗುವಿನ ವಯಸ್ಸನ್ನು ಪರಿಗಣಿಸುವಾಗ ದಿನಾಂಕ 31/05/2023ಕ್ಕೆ ಆರು ವರ್ಷ ಪೂರ್ಣಗೊಳಿಸಿದ್ದು, ಶಾಲೆಗೆ ದಾಖಲಾಗದೇ ಇದ್ದಲ್ಲಿ ಅಂತಹ ಮಗುವನ್ನು ಶಾಲೆಗೆ ಸೇರದ ಮಗು (Never Enrolled) ಎಂದು ಪರಿಗಣಿಸುವುದು.
2023-24ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿರುವ ಸಂದರ್ಭದಲ್ಲಿ ಸಿ.ಡಬ್ಲ್ಯೂ.ಎಸ್.ಎನ್(CwSN) ಶಾಖೆಗೆ ಸಿದ್ಧಪಡಿಸುವ ಕ್ರಿಯಾ ಯೋಜನೆಯಲ್ಲಿ ಹೆಚ್.ಬಿ.ಇ (HBE) ಮತ್ತು ಎಸ್.ಆರ್.ಪಿ (SRP) ಮಕ್ಕಳನ್ನು ಹೊರತುಪಡಿಸಿ ಹೊಸದಾಗಿ ದೊರೆತ ಹೆಚ್.ಬಿ.ಇ (HBE) ಮತ್ತು ಎಸ್.ಆರ್.ಪಿ. ಮಕ್ಕಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಮದರಸ ಕೇಂದ್ರಗಳಲ್ಲಿ ಇರುವ ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಲ್ಲಿ ಅಂತಹ ಮಕ್ಕಳನ್ನು ಓ.ಓ.ಎಸ್.ಸಿ (OoSC) ಎಂದು ಪರಿಗಣಿಸಬಾರದು. ಆಕಸ್ಮಿಕವಾಗಿ ಸಮೀಕ್ಷೆಯಲ್ಲಿ ಗುರುತಿಸದೇ ಇರುವ ಮಗು ತಮ್ಮ ಶಾಲಾ ವ್ಯಾಪ್ತಿಯಲ್ಲಿ ಕಂಡುಬಂದರೆ ಕೂಡಲೇ ಸಮೀಕ್ಷೆ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಇಂತಹ ಮಕ್ಕಳನ್ನು ಶಾಲಾ ಮುಖ್ಯ ಶಿಕ್ಷಕರು ಶಾಲೆಗೆ ದಾಖಲಿಸಿಕೊಳ್ಳಲು ಕ್ರಮವಹಿಸುವುದು.
* ಸಿ.ಆರ್.ಪಿ.ಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಈವರೆಗೆ ಶಾಲೆಗೆ ದಾಖಲಾಗದ ಅರ್ಹ ವಯಸ್ಸಿನ ಮಕ್ಕಳ ಸಮೀಕ್ಷೆ ನಡೆಸಿ ಸಮೀಪದ ಶಾಲೆಗೆ ದಾಖಲಿಸಲು ಕ್ರಮವಹಿಸುವುದು. ಹಾಜರಾತಿ ಪ್ರಾಧಿಕಾರಿಗಳಾದ ಶಿಕ್ಷಣ ಸಂಯೋಜಕರು ತಮ್ಮ ಹೋಬಳಿ ವ್ಯಾಪ್ತಿಯ ಎಲ್ಲಾ ಸಿ.ಆರ್.ಪಿ.ಗಳ ಸಭೆ ಕರೆದು ಸಮೀಕ್ಷಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಮತ್ತು ನಿಗದಿತ ಸಿ.ಆರ್.ಪಿ.ಗಳು ನಿಖರವಾದ ಮಾಹಿತಿಯನ್ನು ಅವಧಿಯಲ್ಲಿ ಎಲ್ಲಾ ಇಂದೀಕರಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಬಿ.ಆರ್.ಸಿಗಳಿಗೆ ಸಲ್ಲಿಸುವುದು.
* ಡಯಟ್ ಹಂತದಲ್ಲಿ ಸದರಿ ಸಮೀಕ್ಷೆ ಕಾರ್ಯಕ್ಕೆ ಪ್ರತಿ ತಾಲ್ಲೂಕಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ಜಿಲ್ಲಾ DYPC/ ಸಹಯೋಗದೊಂದಿಗೆ ಸಮೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮೇಲ್ವಿಚಾರಣೆ ನಡೆಸುವುದು. ಶಾಲೆಯಿಂದ ಹೊರಗುಳಿದ ಮಕ್ಕಳು (6 ರಿಂದ 16 ವಯೋಮಾನ) ಕಂಡು ಬರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ನಿಖರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಸ್ತರದ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿಯನ್ನು ಸಂಗ್ರಹಿಸಿ ಕ್ರೋಢೀಕರಿಸಿ ಇಂದೀಕರಿಸಲು ಕ್ರಮವಹಿಸುವುದು.ಅಂತಿಮವಾದ ಮಕ್ಕಳ ಸಂಖ್ಯೆಯನ್ನು 2024-25ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ, ಕಾರ್ಯತಂತ್ರ ರೂಪಿಸಬೇಕು ಎಂದು ಸೂಚನೆ ನೀಡಲಾಗಿದೆ.

No comments:
Post a Comment