Saturday, February 8, 2025

Pariksha Pe Charcha 2025 (#PPC2025) is back! 🌟 Hon’ble Prime Minister Shri Narendra Modi will engage with students, parents, and teachers in an inspiring session,

  Wisdom News       Saturday, February 8, 2025
Hedding : Pariksha Pe Charcha 2025 (#PPC2025) is back! 🌟 Hon’ble Prime Minister Shri Narendra Modi will engage with students, parents, and teachers in an inspiring session, 


SSLC ಮಕ್ಕಳೇ ಓದುವುದು ಹೇಗೆ ಮತ್ತು ಅದರ ಕ್ರಮಗಳು:*

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. ಈಗಲೂ ತಡವಾಗಿಲ್ಲ. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯದಿಂದ ದೂರಾಗಬಹುದು.

*1. ವೇಳಾಪಟ್ಟಿ ರೂಪಿಸಿಕೊಳ್ಳಿ.*

ವಾರದಲ್ಲಿ ಏಳು ದಿನಗಳಿವೆ. ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿಡಿ. ಈ ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆ ಪಡೆದುಕೊಳ್ಳಿ. ಅವಶ್ಯವೆನಿಸಿದರೆ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ.

*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*

ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಅಲ್ಲಿ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.

*3. ಅಧ್ಯಯನದ ಸಮಯ.*

ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.
ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.



*4. ಸ್ಪಷ್ಟ ಗುರಿಯಿರಲಿ.*

ನಿಮ್ಮ ಸಾಧನೆಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಿ. ಆ ಗುರಿ ನೈಜವಾಗಿರಬೇಕು, ಸಾಧಿಸುವಂತಿರಬೇಕು ಮತ್ತು ಕಾಲಮಿತಿಗೆ ಒಳಪಟ್ಟಿರಬೇಕು. ಗುರಿಯನ್ನು ತಲುಪುವ ಬಗ್ಗೆ ದೃಢ ಸಂಕಲ್ಪ ಮಾಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ಹಾಗೆಯೇ ಕೀಳರಿಮೆಯೂ ಬೇಡ.
ಅನವಶ್ಯಕ ವಿಷಯಗಳಿಂದ ದೂರವಿದ್ದಷ್ಟೂ ಗುರಿ ಸಾಧನೆಗೆ ನೀವು ಹತ್ತಿರವಾಗುತ್ತೀರಿ.

*5. ವಿಷಯದ ಆಯ್ಕೆ.*

ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.



*ಅಧ್ಯಯನದ ವಿಧಾನ ಹೇಗೆ?*

ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ.

ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.

ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.

ಸಿದ್ಧತೆಯಲ್ಲಿ ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.



*6. ಓದುವಾಗ ಏಕಾಗ್ರತೆ ಇರಲಿ.*

ಓದಿದ ವಿಷಯ ಅರ್ಥವಾಗಿ ನೆನಪಿನಲ್ಲಿ ಉಳಿಯಬೇಕಾದರೆ, ಓದಿನಲ್ಲಿ ಏಕಾಗ್ರತೆ ಅತ್ಯಂತ ಅವಶ್ಯಕ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಆಕರ್ಷಣೆಗಳಿಂದ ದೂರವಿರಿ. ಓದುವ ಸಮಯದಲ್ಲಿ ಮೊಬೈಲ್ ಫೋನಿನ ಬಳಕೆ ಮಾಡುವುದಾಗಲೀ, ಸ್ನೇಹಿತರ ಜೊತೆಗೆ ಚಾಟ್ ಮಾಡುವುದಾಗಲೀ ಖಂಡಿತಾ ಸಲ್ಲದು.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಕನಿಷ್ಠ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.

*7. ನಿದ್ರೆ, ಆಹಾರದ ನಿರ್ಲಕ್ಷ್ಯ ಬೇಡ.*

ನಿದ್ರೆಗೆಟ್ಟು ರಾತ್ರಿಯೆಲ್ಲಾ ಓದುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಆರರಿಂದ ಎಂಟು ತಾಸಿನ ನಿದ್ರೆ ನಿಮಗೆ ಅವಶ್ಯಕ. ಹಸಿದುಕೊಂಡು ಓದಲು ಕೂರಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಈ ದಿನಗಳಲ್ಲಿ ನಿಮಗೆ ಸಮತೋಲಿತ ಆಹಾರ ಅತ್ಯವಶ್ಯ. ದಿನಕ್ಕೆ ಐದಾರು ಲೋಟಗಳಷ್ಟು ನೀರು ಕುಡಿಯಿರಿ.

*ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ* 
👍👍👍🤝🤝

ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಹಾಗೂ ಹೆಚ್ಚಿದ ಸಾಮಾಜಿಕ ಒತ್ತಡದಿಂದ ‘ಪರೀಕ್ಷಾ ಆತಂಕ’ ಹಿಂದೆಂದೂ ಕಾಣದಷ್ಟು ಪ್ರಾಮುಖ್ಯ ಪಡೆಯುತ್ತಿದೆ. ಒಂಬತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳು ನಪಾಸಾಗುವಂತಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕವೇನೂ ಕಡಿಮೆ ಆಗಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳೂ ಪರೀಕ್ಷೆಯೆಂದರೆ ಭಯಪಡುವ ಸಂದರ್ಭಗಳನ್ನು ಕಾಣುತ್ತಿದ್ದೇವೆ.

ಪರೀಕ್ಷೆಗಳು ಹತ್ತಿರವಾಗುತ್ತಲೇ ಮಕ್ಕಳಿಗಿಂತಲೂ ಹೆತ್ತವರು ಹೆಚ್ಚು ಆತಂಕಿತರಾಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಾರಂಭಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರದ್ದು ಅದೇ ಧಾಟಿ. ‘ಪರೀಕ್ಷೆ ಹತ್ತಿರ ಬಂತು, ಈ ಬಾರಿ ಪಬ್ಲಿಕ್ ಪರೀಕ್ಷೆ. ಗಂಭೀರವಾಗಿ ತೆಗೆದುಕೊಳ್ಳಿ’ ಎನ್ನುವ ಸಲಹೆ. ನಮಗೆ ತಿಳಿದೋ ತಿಳಿದೆಯೋ ಪರೀಕ್ಷೆ ಬಂತು ಪರೀಕ್ಷೆ ಬಂತು ಎನ್ನುವ ಧ್ವನಿ ‘ಭೂತ ಬಂತು ಭೂತ ಬಂತು’ ಎನ್ನುವ ಹಾಗೆ ಧ್ವನಿಸುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ.


ಹಾಗಿದ್ದರೆ ಪರೀಕ್ಷೆಗಳ ಬಗ್ಗೆ ಭಯ ಬೇಡವೇ? ಸ್ವಲ್ಪವೂ ಭಯವಿರದಿದ್ದರೆ ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವಿರಾ? ನಿಜ. ಸಣ್ಣ ಪ್ರಮಾಣದ, ಆರೋಗ್ಯಕರ ಭಯ ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆದರೆ ಅದು ಅತಿಯಾಗದಂತೆ ನೋಡಿಕೊಳ್ಳಬೇಕು. ದುರದೃಷ್ಟವೆಂದರೆ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕಗಳನ್ನೇ ಪಡೆದುಕೊಂಡ ವಿದ್ಯಾರ್ಥಿಗಳೂ ಹೆಚ್ಚಿನ ಪ್ರಮಾಣದಲ್ಲಿ ಆತಂಕ ಅನುಭವಿಸುವುದೂ.

ಪರೀಕ್ಷಾ ಆತಂಕದ ಲಕ್ಷಣಗಳು
1) ಭಾವನಾತ್ಮಕ ಲಕ್ಷಣಗಳು
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಮಕ್ಕಳಲ್ಲಿ ಹಿಂದಿನ ಪರೀಕ್ಷೆಗಳ ಕಹಿ ಅನುಭವಗಳ ನೆನಪು, ಮತ್ತೆ ಫೇಲಾದರೆ ಎನ್ನುವ ಭಯ, ಅಸಹಾಯಕತೆ, ಏನೂ ಹೊಳೆಯದಂತಹ ಸ್ಥಿತಿ, ಋಣಾತ್ಮಕ ಆಲೋಚನೆಗಳು ಕಾಡತೊಡಗುತ್ತವೆ. ತಮ್ಮನ್ನೇ ಹಳಿದುಕೊಳ್ಳುವುದು, ಮುಜುಗರ ಅನುಭವಿಸುವುದು, ಅಕಾರಣ ಸಿಟ್ಟು, ಆತಂಕ ಕಂಡುಬರುವುದು.

2) ದೈಹಿಕ ಲಕ್ಷಣಗಳು
* ವಾಕರಿಕೆ, ತಲೆಸುತ್ತು

* ಉಸಿರಾಡಲು ಕಷ್ಟವಾಗುವುದು.

* ತಲೆನೋವು

* ಹಸಿವಿಲ್ಲದಿರುವುದು

* ನಿದ್ರಾಹೀನತೆ

* ಎದೆಬಡಿತ ಜೋರಾಗುವುದು..

ಕಡಿಮೆ ಮಾಡುವುದು ಹೇಗೆ?
ಪರೀಕ್ಷೆ ಕುರಿತಾಗಿ ಶಾಲೆಯಲ್ಲಿ, ಮನೆಯಲ್ಲಿ ಕೆಲವು ವಿಚಾರಗಳನ್ನು ತಿಳಿಸಬೇಕು. ‘ನಾನು ವಿದ್ಯಾರ್ಥಿ, ನನ್ನ ಕರ್ತವ್ಯದಂತೆ ಶಾಲೆಗೆ ಹೋಗಿದ್ದೇನೆ. ಪಾಠಗಳನ್ನು ಕೇಳಿಸಿಕೊಂಡಿದ್ದೇನೆ. ನೋಟ್ಸ್ ಬರೆದುಕೊಂಡಿದ್ದೇನೆ. ಇನ್ನು ನನ್ನ ಮುಂದೆ ಇರುವುದು ಪರೀಕ್ಷೆಗೆ ಉಳಿದಿರುವ ದಿನಗಳನ್ನು ವಿಭಜಿಸಿ, ಓದಿದ್ದನ್ನು ಪುನರ್‌ ಮನನ ಮಾಡಿಕೊಂಡು ಪರೀಕ್ಷೆ ಬರೆಯುವುದು ಮಾತ್ರ. ನನ್ನ ನಿಯಂತ್ರಣದಲ್ಲಿರುವ ಕರ್ತವ್ಯವನ್ನು ನಾನು ಚೆನ್ನಾಗಿಯೇ ಮಾಡುವೆ. ನನ್ನ ಮಿತಿಯಲ್ಲಿರದ ವಿಚಾರಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನನ್ನ ಮಿತಿಯಲ್ಲಿರದ ವಿಚಾರಗಳೆಂದರೆ, ಪ್ರಶ್ನೆಪತ್ರಿಕೆ ಹೇಗಿರುತ್ತದೆ? ಮೌಲ್ಯಮಾಪನ ಹೇಗಿರುತ್ತದೆ? ನಾನು ಓದಿದ ವಿಷಯಗಳೇ ಪರೀಕ್ಷೆಗೆ ಬರುತ್ತದೋ ಇಲ್ಲವೋ, ನನಗೆ ಸಮಯ ಸಾಲದಿದ್ದರೆ? ಓದಿದ್ದು ಮರೆತು ಹೋದರೆ? ಅಂಕಗಳು ಕಡಿಮೆ ಬಂದರೆ? ನಾನು ಫೇಲಾದರೆ’ ಇಂಥ ಪ್ರಶ್ನೆಗಳನ್ನು ಗುರುತಿಸಿ ಆ ವಿಚಾರಗಳನ್ನು ಅಲಕ್ಷಿಸುವುದನ್ನು ಹೇಳಿಕೊಡಬೇಕು. ನಮ್ಮ ಗಮನ ಶೇ 100ರಷ್ಟು ಕಾರ್ಯಕ್ಷಮತೆಯ ಕಡೆ ಇರಬೇಕೇ ವಿನಃ ಶೇ 100ರಷ್ಟು ಅಂಕಗಳಲ್ಲ ಎಂದು ತಿಳಿಸಿಕೊಡಬೇಕು.

* ಪರೀಕ್ಷಾ ಆತಂಕ ಇರುವ ಮಕ್ಕಳನ್ನು ಗುರುತಿಸಿ ಈ ವಿಚಾರಗಳನ್ನು ತಿಳಿಸಬೇಕು.

ಅಣುಕು ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಾರ್ಯಕ್ಷಮತೆಯನ್ನು ಗುರುತಿಸಿ ಧೈರ್ಯ ತುಂಬಬೇಕು.

* ದೀರ್ಘ ಉಸಿರಾಟದ ಕ್ರಮಗಳನ್ನು ಕಲಿಸಿಕೊಡಬೇಕು.

* ಫೇಲಾಗುವ ಆತಂಕವಿದ್ದರೆ ಪದ್ಯದ ಇಡೀ ಓದಿನ ಬದಲು ಆಯ್ದ ಭಾಗಗಳನ್ನು ಸರಿಯಾಗಿ ಓದಲು ತಿಳಿಸಬೇಕು.

ಅತಿ ಆತಂಕ ಗುರುತಿಸುವುದು ಹೇಗೆ?
* ಪೋಷಕರು - ಶಿಕ್ಷಕರು ಅದೆಷ್ಟೇ ಸಮಾಧಾನ ಮಾಡಿದರೂ ಮಗು ಅತಿಯಾಗಿ ಭಯಪಡುವುದು, ಶಾಲೆ, ಪರೀಕ್ಷೆಗಳನ್ನು ತಪ್ಪಿಸುವುದು.

* ವೈದ್ಯರು ತಪಾಸಣೆ ಮಾಡಿಯೂ ಯಾವುದೇ ನಿಗದಿತ ಕಾಯಿಲೆಯಿರದಿದ್ದರೂ ನಿಲ್ಲದ ದೈಹಿಕಲಕ್ಷಣಗಳಾದ ವಾಂತಿ, ವಾಕರಿಕೆ, ನಿದ್ರಾಹೀನತೆ, ತಲೆನೋವು ಇತ್ಯಾದಿ.

* ಸದಾ ಆತಂಕಿತರಾಗಿರುವುದು, ಕಣ್ಣೀರಿಡುವುದು, ಓದಲು ನಿರಾಕರಿಸುವುದು.

* ತನ್ನನ್ನೇ ಹಳಿದುಕೊಳ್ಳುವುದು, ಬದುಕಿರುವುದು ವ್ಯರ್ಥವೆನ್ನುವಂತಹ ಮಾತುಗಳನ್ನಾಡುವುದು.

* ಅಪರಾಧಿ ಮನೋಭಾವ ಹೊಂದಿರುವುದು, ತಾನು ಒಳ್ಳೆಯ ವಿದ್ಯಾರ್ಥಿಯಲ್ಲ, ಒಳ್ಳೆಯ ಮಗ/ಮಗಳಲ್ಲ ಎನ್ನುವ ಭಾವನೆಗಳನ್ನು ಹೊಂದಿರುವುದು .

National Crime Records Bureau (NCRB) 2017-2021ರ ವರದಿಯ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಕರಣಗಳು ಶೇ 21.79ರಷ್ಟು ಹೆಚ್ಚಿವೆ. ಇದು ಆತಂಕದಾಯಕ ವಿಷಯ. ಒತ್ತಡಮಯ ಶೈಕ್ಷಣಿಕ ಬದುಕಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶಿಕ್ಷಕರು ಮುಂದಾದರೆ, ಹೆತ್ತವರು ಮಕ್ಕಳಿಗೆ ಅನವಶ್ಯಕ ಒತ್ತಡ ಹೇರದೆ, ಇತರರೊಂದಿಗೆ ಹೋಲಿಕೆ ಮಾಡದೆ ಪರೀಕ್ಷೆಯ ದಿನಗಳಲ್ಲಿ ಜತೆಗಿದ್ದರೆ ಈ ಆತ್ಮಹತ್ಯೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು.

ಶಿಕ್ಷಕರಿಗೆ ಸಲಹೆಗಳು
* ಪರೀಕ್ಷೆ ಬಂತು ಓದಿ ಎಂದು ಒತ್ತಾಯ ಮಾಡುವ ಜೊತೆಗೆ ಹೇಗೆ ಓದಬೇಕು ಎಂದು ತಿಳಿಸಿಕೊಡಿ.

* ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಕಲೆ. ಆ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಿ.

* ಸಮಯ ನಿಭಾವಣೆ ಕಲಿಸಿಕೊಡಿ.

* ಅಣುಕು ಪರೀಕ್ಷೆಗಳನ್ನು ನಡೆಸಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ.

ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಲು ಸಹಾಯ ಮಾಡಿ.

* ಯೋಗ - ಪ್ರಾಣಾಯಾಮಗಳನ್ನು ಕಲಿಸಿಕೊಡಿ.

* ನೀನು ಒಳ್ಳೆಯ ವಿದ್ಯಾರ್ಥಿ, ನಿಮ್ಮಿಂದ ಶಾಲೆಗೆ ರ‍್ಯಾಂಕ್ ಬಂದೇ ಬರುತ್ತದೆ ಎಂದು ನಮ್ಮ ನಿರೀಕ್ಷೆ ಎನ್ನುವಂತಹ ಮಾತುಗಳು ಬೇಡ.

* ನೀನು ಪ್ರಯತ್ನ ಪಡಬೇಕು. ನೀನು ಫೇಲಾದರೆ ಶಾಲೆಯ ಪರ್ಸಂಟೇಜ್ ಹಾಳಾಗುತ್ತದೆ ಎನ್ನುವಂತಹ ಮಾತುಗಳಂತೂ ಖಂಡಿತ ಬೇಡ.

ಹೆತ್ತವರಿಗೆ ಸಲಹೆಗಳು
* ಪರೀಕ್ಷಾ ಮುನ್ನ ತಯಾರಿಯಲ್ಲಿ ಜೊತೆಗಿರಿ.

* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಿ, ಹಾಗೆ ಓದಲು ತಿಳಿಸಿ.























logoblog

Thanks for reading Pariksha Pe Charcha 2025 (#PPC2025) is back! 🌟 Hon’ble Prime Minister Shri Narendra Modi will engage with students, parents, and teachers in an inspiring session,

Previous
« Prev Post

No comments:

Post a Comment