1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭದಲ್ಲೇ ಸೇತುಬಂಧ ಶಿಕ್ಷಣ, ಇತರೆ ತರಬೇತಿಗಳು
2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭ ಸನ್ನಿಹಿತವಾಗಿದೆ. ಶಾಲೆಗೆ ಬರುವ ಮಕ್ಕಳ ಕಲಿಕಾ ಗುಣಮಟ್ಟವನ್ನು ಆರಂಭದಲ್ಲೇ ತಿಳಿದು, ವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಮಕ್ಕಳಿಗೆ ಸೇತುಬಂಧ ಶಿಕ್ಷಣ, ತರಬೇತಿಗಳನ್ನು ನೀಡಲು ಶಾಲೆಗಳಿಗೆ ಸೂಚನೆ ನೀಡಿದೆ.
2023-24ನೇ ಸಾಲಿನ ಶೈಕ್ಷಣಿ ಅವಧಿ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಲಿದೆ. ಈ ಸಾಲಿನ ಶಾಲೆಗಳ ಆರಂಭದಲ್ಲೇ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲನೆ, ಸುಧಾರಣೆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ, ಇತರೆ ತರಬೇತಿಗಳನ್ನು ಕೈಗೊಳ್ಳಲು ಮುಂದಾಗಿದೆ. ಇದಕ್ಕೆ ಸಂಬಂಧ ಶಾಲೆಗಳಿಗೆ ಸೂಚನೆಗಳನ್ನು ನೀಡಿದೆ.
ಶಾಲಾ ವಿದ್ಯಾರ್ಥಿಗಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧ ಗೊಳಿಸುವ ನಿಟ್ಟಿನಲ್ಲಿ ಶಾಲಾರಂಭದ ಮೊದಲ 30 ದಿನಗಳಲ್ಲಿ 1 ರಿಂದ 3ನೇ ಕ್ಲಾಸ್ಗೆ ಹಾಗೂ ಮೊದಲ 15 ದಿನ 4 ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಸೇತುಬಂಧ ಶಿಕ್ಷಣ ನೀಡುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ತರಗತಿವಾರು, ವಿಷಯವಾರು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಕನ್ನಡ, ತಮಿಳು, ಉರ್ದು, ಮರಾಠಿ ಮತ್ತು ತೆಲುಗಿಗೆ ಸಂಬಂಧಿಸಿದ ಕಲಿಕಾ ಸಾಮಾಗ್ರಿಗಳನ್ನು ಡಿಎಸ್ಇಅರ್ಟಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇವುಗಳನ್ನು ಬಳಸಿಕೊಂಡು ಸೇತುಬಂಧ ಯಶಸ್ವಿಗೊಳಿಸಬೇಕು ಎಂದು ಡಿಎಸ್ಇಆರ್ಟಿ ನಿರ್ದೇಶಕರು ಶಾಲೆಗಳಿಗೆ ತಿಳಿಸಿದ್ದಾರೆ.
2024-25ನೇ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ಧಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. 8 ನೇ ತರಗತಿಯಿಂದ 10ನೇ ತರಗತಿ ವರೆಗಿನ ಸ್ಟೂಡೆಂಟ್ಗಳಿಗೆ ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಿಗೆ 'ಮರುಸಿಂಚನ' ಕಾರ್ಯಕ್ರಮದಡಿ ಸಿದ್ಧಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು ನೀಡಲಾಗಿದೆ., ಈ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಯನ್ನು ಅನುಕೂಲಗೊಳಿಸಲು ಕ್ರಿಯಾಯೋಜನೆ ರೂಪಿಸುವುದು ಅಗತ್ಯವಾಗಿದೆ.
ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಹಾಗೂ ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ದಾಖಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಮಕ್ಕಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ನಿರ್ವಹಿಸಬೇಕು. ಕಲಿಕೆಯನ್ನು ಆಧರಿಸಿ ಸರಳ ಯೋಜನೆಗಳು, ರಸಪ್ರಶ್ನೆ, ಲಿಖಿತ ಅಥವಾ ಮೌಖಿಕ ಪ್ರಶ್ನೋತ್ತರ, ಸಂಭಾಷಣೆ, ಸರಳ ಚಟುವಟಿಕೆಗಳು ಹಾಗೂ ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿ ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ತಿಳಿಸಿದ್ದಾರೆ.

No comments:
Post a Comment