ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಿರ್ವಹಿಸುವಲ್ಲಿ ವಿಫಲರಾದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಅವರನ್ನು ಅಮಾನತುಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಸರಿಯಾಗಿ ಮಾಡಿಲ್ಲ.
ಪರೀಕ್ಷೆ ನಕಲಿಗೆ ಅವಕಾಶ ನೀಡಿದ ಆರೋಪವೂ ಅವರ ಮೇಲಿದೆ. ಹೊರ್ತಿಯ ರೇವಣ ಸಿದ್ದೇಶ್ವರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಕಾರಜೋಳದ ರಾಣಿ ಚನ್ನಮ್ಮ ವಸತಿ ಶಾಲೆಯ ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳನ್ನು ತಪಾಸಣೆ ಮಾಡದೇ ಬಿಟ್ಟಿರುವುದು ಮತ್ತು ಪರೀಕ್ಷಾ ಕೇಂದ್ರದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗುಂಪುಗೂಡಿ ನಕಲು ಮಾಡಲು ಸಹಕರಿಸಿರುವುದು ವಿಚಾರಣೆ ವೇಳೆ ಸಾಬೀತಾಗಿದೆ.
ಈ ಬಗ್ಗೆ ವಿವರಣಾತ್ಮಕ ವರದಿ ನೀಡುವಂತೆ ಸೂಚಿಸಿದರೂ ಸೂಕ್ತ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹಿರಿಯ ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಅಧಿಕೃತ ಆದೇಶ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
ಮೇಲೆ ಓದಲಾದ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಪತ್ರದಲ್ಲಿ ಅಪರ ಆಯುಕ್ತರು ದಿನಾಂಕ:02/04/2024ರಂದು ವಿಜಯಪುರ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಉಪನಿರ್ದೇಶಕರ ಕಚೇರಿ ಕಂಟ್ರೋಲ್ ರೂಮ್ ಪರಿಶೀಲಿಸಲಾಗಿ, ಜಿಲ್ಲೆಯಲ್ಲಿ 127 ಪರೀಕ್ಷಾ ಕೇಂದ್ರಗಳಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ರವರ ಸುತ್ತೋಲೆ ದಿನಾಂಕ: 01/04/2024 ರಂತೆ ಪ್ರತಿ 10 ಪರೀಕ್ಷಾ ಕೇಂದ್ರಗಳಿಗೆ ಒಂದು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ಗಳನ್ನು ಜೋಡಿಸಿ ಸಿಸಿಟಿವಿಗಳಲ್ಲಿ ದಾಖಲಾಗುವ ದೃಶ್ಯಾವಳಿಗಳನ್ನು ವೀಕ್ಷಿಸಿ ವರದಿ ನೀಡುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಅಲ್ಲದೇ ಅಪರ ಆಯುಕ್ತರ ಕಚೇರಿಯಿಂದ ಹಲವಾರು ಬಾರಿ ಗೂಗಲ್ ಮೀಟ್ ಸಭೆಯಲ್ಲಿ ಹಾಗೂ ಸುತ್ತೋಲೆಗಳ ಮೂಲಕ ತಿಳಿಸಿದಾಗ್ಯೂ ಯಾವುದೇ ಸಮರ್ಪಕವಾದ ಕ್ರಮ ಅನುಸರಿಸದೇ ಇರುವುದು ಕಂಡುಬಂದಿರುತ್ತದೆ.
ವಿಜಯಪುರ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಒಂದು ಲ್ಯಾಪ್ಟಾಪ್ ಹಾಗೂ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಸಂಬಂಧಿಸಿದ ನಿಯೋಜಿತ ಸಿಬ್ಬಂದಿಯಾದ ಶ್ರೀ ಸಾತರೇಕರ, ಉರ್ದು ಶಿಕ್ಷಣ ಸಂಯೋಜಕರು ಕೇವಲ ಒಂದು ಲ್ಯಾಪ್ಟಾಪ್ ಮಾತ್ರ ಒದಗಿಸಿದ್ದು ಎಲ್ಲಾ ಕೇಂದ್ರಗಳನ್ನು ವೀಕ್ಷಣೆ ಮಾಡಲು ಸಾಧ್ಯವಿಲ್ಲ ಹಾಗೂ ಹೆಚ್ಚುವರಿ ಸಿಬ್ಬಂದಿ ಹಾಗೂ ಲ್ಯಾಪ್ಟಾಪ್ಗಳನ್ನು ಒದಗಿಸಿರುವುದಿಲ್ಲವೆಂದು ತಿಳಿಸಿದರು. ಅಲ್ಲದೇ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದೂ ಕೇವಲ ಎರಡು ಕಂಪ್ಯೂಟರ್ಗಳನ್ನು ಹಾಗೂ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಿದ್ದು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೇ ಇರುವುದು ಕಂಡು ಬರುತ್ತದೆ.
ಸಿಬ್ಬಂದಿಗಳಾದ ಶ್ರೀಮತಿ ಎಸ್.ಎ.ಮೋಮಿನ್, ತಾಂತ್ರಿಕ ಸಹಾಯಕರು, ಎಸ್.ಎಸ್.ಕೆ, ವಿಜಯಪುರ ಹಾಗೂ ಶ್ರೀ ರೇಖಾ.ಬಿ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖತೀಜಾಪುರ ಇವರು ಎರಡು ಲ್ಯಾಪ್ಟಾಪ್ಗಳನ್ನು ನೀಡಿದ್ದು ಒಂದರಲ್ಲಿ 50 ಕೇಂದ್ರಗಳ ಮಾಹಿತಿಯನ್ನು ಹಾಗೂ ಇನ್ನೊಂದರಲ್ಲಿ 16 ಕೇಂದ್ರಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದ್ದು ಅಷ್ಟನ್ನು ಮಾತ್ರ ವೀಕ್ಷಿಸಬಹುದಾಗಿದ್ದು ಉಳಿದವುಗಳನ್ನು ವೀಕ್ಷಿಸಲಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಅಲ್ಲದೇ ಹೆಚ್ಚುವರಿ ಸಿಬ್ಬಂದಿ ಹಾಗೂ ಲ್ಯಾಪ್ಟಾಪ್ಗಳ ಅವಶ್ಯಕತೆ ಇದೆ ಎಂದು ಉಪನಿರ್ದೇಶಕರಿಗೆ ತಿಳಿಸಿರುವುದಾಗಿ ತಿಳಿಸಿದರು.
ಈ ಕುರಿತಂತೆ ಉಪನಿರ್ದೇಶಕರಿಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಿರುವುದಿಲ್ಲ. ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಾಗಿ, ಉಪನಿರ್ದೇಶಕರು ಯಾವುದೇ ಮಾಹಿತಿ ನೀಡದಿರುವುದು ಕಂಡುಬಂದಿತು. ಆದ್ದರಿಂದ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಇವರು ಎಸ್.ಎಸ್.ಎಲ್.ಸಿ. ಕಾರ್ಯವನ್ನು ಗಂಭೀರವಾಗಿ ಪರಿಗಣಿಸದೇ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುವುದರಿಂದ ಸದರಿಯವರ ಮೇಲೆ ಸೂಕ್ತ ಶಿಸ್ತು ಕ್ರಮ ಕೋರಿರುತ್ತಾರೆ.
No comments:
Post a Comment