SSLC Exam 2023-24; ನಕಲು ತಡೆಗೆ ಮಾರ್ಗಸೂಚಿ ಪ್ರಕಟ
ಆಗಸ್ಟ್ 08; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳ ರಚನೆ ಮತ್ತು ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುರಿತಂತೆ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ 01/07/2023ರಂದು ನಡೆದ ಸಭೆಯ ನಡಾವಳಿಯಂತೆ ಮಾರ್ಗಸೂಚಿ ಹೊರಡಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಈ ಪರೀಕ್ಷೆಯ ಒಂದು ದಿಕ್ಕೂಚಿಯಾಗಲಿದ್ದು, ವಿದ್ಯಾರ್ಥಿಗಳ ಮನಸ್ಥೆರ್ಯವನ್ನು ಗಟ್ಟಿಗೊಳಿಸುವ ಪರೀಕ್ಷೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಪಠ್ಯಾಂಶಗಳನ್ನು ಮನನವಾಗುವ ರೀತಿಯಲ್ಲಿ ಬೋಧಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿಸಬೇಕಾಗಿದೆ ಎಂದು ಹೇಳಿದ್ದಾರೆ.
ಶಾಲಾ ಹಂತದಲ್ಲಿ ಘಟಕ ಪರೀಕ್ಷೆ, ರೂಪಣಾತ್ಮಕ, ಸಂಕಲನಾತ್ಮಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವುದರ ಜೊತೆಗೆ ಪ್ರಶ್ನೆ ಪತ್ರಿಕೆಯ ಮಾದರಿಗಳ ಪರಿಚಯ ಮತ್ತು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಕ್ರಮ ಮುಂತಾದ ಅಂಶಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುವಂತೆ ಸೂಕ್ತ ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
2023-245 ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮಂಡಳಿಯ ನಿರ್ವಹಿಸುವ ರೀತಿ- ರಿವಾಜುಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಕಲಿಗೆ ಶಿಕ್ಷಕರು ಸಹಕರಿಸದಂತೆ ಹಾಗೂ ವಿದ್ಯಾರ್ಥಿಗಳು ನಕಲು ನಡೆಸದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕಾಗಿರುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷಾ ಅಕ್ರಮ ತಡೆ; ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಕಾರ್ಯ ಸೇರಿದಂತೆ ಪರೀಕ್ಷೆ, ಅವ್ಯವಹಾರ ನಡೆಸದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸುವ ಕಾರ್ಯ ಅತಿ ಜರೂರಾಗಿ ಆಗಬೇಕಾಗಿದೆ. ಆದ್ದರಿಂದ ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿರುವ ಪರಿಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಕಡ್ಡಾಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಂಖ್ಯೆಯ ಕೊಠಡಿಗಳು, ಆಸನದ ವ್ಯವಸ್ಥೆಗಾಗಿ ಪೀಠೋಪಕರಣಗಳು, ಶಾಲೆಯ ಸುತ್ತ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ ಕ್ಯಾಮರಾ ಅಳವಡಿಸಿರುವಿಕೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ ಸಾರಿಗೆ ಸೌಲಭ್ಯ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ರಸ್ತೆ ಮಾರ್ಗ ಮುಂತಾದ ಎಲ್ಲಾ ಸೌಲಭ್ಯಗಳು ಇರುವ ಬಗ್ಗೆ, ಪರಿಶೀಲಿಸುವುದು ಅತ್ಯವಶ್ಯಕವಾಗಿದೆ.
* ಪ್ರತಿ ಕೊಂಡಿಗೆ 24 ವಿದ್ಯಾರ್ಥಿಗಳು ಮಾತ್ರ ಹಂಚಿಕೆಯಾಗುವಂತೆ, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 400 ರಿಂದ ಗರಿಷ್ಠ 800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಯೆಯಿರುವ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡುವುದು.
2023ರಲ್ಲಿ ನಡೆದ ಎಸ್ ಎಸ್ ಎಲ್ ಸಿ. ಮುಖ್ಯ ಪರೀಕ್ಷೆಗೆ ರಾಜ್ಯದಾದ್ಯಂತ ಒಟ್ಟು 3305 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಇದರಲ್ಲಿ ಜಿಲ್ಲಾ ಕೇಂದ್ರದಲ್ಲಿ 724, ತಾಲ್ಲೂಕು ಕೇಂದ್ರದಲ್ಲಿ 755, ಹೋಬಳಿ ಕೇಂದ್ರದಲ್ಲಿ 604 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ-1222 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿರುತ್ತದೆ. 2024ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಸಾಧ್ಯವಾದಷ್ಟು ಕ್ಲಸ್ಟರ್ರಹಿತ/ ಸ್ವತಂತ್ರ ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸುವುದು.
* 10 ಕಿ. ಮೀ. ವ್ಯಾಪ್ತಿಯೊಳಗೆ 8-10 ಶಾಲೆಗಳನ್ನು ಸೇರಿಸಿ ಕ್ಲಸ್ಟರ್ ಹಂತದಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಪರೀಕ್ಷಾ ಕೇಂದ್ರವನ್ನು ರಚನೆ ಮಾಡುವುದು. ಶಾಲೆಯಲ್ಲಿನ ಎಲ್ಲಾ ಕೊಠಡಿಗಳು ಮತ್ತು ಶಾಲಾ ಕಾರಿಡಾರ್ಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿರುವ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸುವುದು. ಸಿಸಿಟಿವಿ ಕ್ಯಾಮರಾಗಳು ಪರೀಕ್ಷಾ ದಿನಗಳಲ್ಲಿ ದಿನದ 24 ಗಂಟೆಯಲ್ಲೂ ಕಾರ್ಯ ನಿರ್ವಹಿಸುವಂತಿರಬೇಕು.
ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಹುಮಹಡಿ ಕಟ್ಟಡವಿರುವ ಪರೀಕ್ಷಾ ಕೇಂದ್ರಗಳಲ್ಲಿ ಸಾಧ್ಯವಾದಷ್ಟು ಪರೀಕ್ಷೆಗೆ ನೆಲಮಹಡಿಯಲ್ಲಿ ಆಸನ ವ್ಯವಸ್ಥೆಯನ್ನು ಮಾಡದೇ ಮೊದಲನೇ ಮಹಡಿಯಿಂದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡುವುದು. ಪರೀಕ್ಷಾ ಕೇಂದ್ರದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ನೆಲಮಹಡಿಯಲ್ಲಿ ಆಸನ ವ್ಯವಸ್ಥೆ ಮಾಡುವುದು.
* ಖಾಸಗಿ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ರಚಿಸದೇ ಸದರಿ ಅಭ್ಯರ್ಥಿಗಳನ್ನು ಸಾಮಾನ್ಯ (ರೆಗ್ಯುಲರ್) ಪರೀಕ್ಷಾ ಕೇಂದ್ರಗಳಿಗೆ ಹಂಚಿಕೆ ಮಾಡುವುದು. ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ರಚಿಸುವುದರ ಮುಖಾಂತರ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆಯಾದಷ್ಟು ಇಲಾಖೆಯ ಅಧಿಕಾರಿಗಳು ಉಸ್ತುವಾರಿ ಮಾಡಲು ಎಲ್ಲಾ ಹಂತದ ಅಧಿಕಾರಿಗಳು ನಿಗಾವಹಿಸಲು ಅನುಕೂಲವಾಗುತ್ತದೆ.
ನಕಲು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು
* ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ವಿದ್ಯಾರ್ಥಿಗಳು ಪಠ್ಯ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಕಾಲಕಾಲಕ್ಕೆ ಶಾಲಾ ಹಂತದಲ್ಲಿ ನಡೆಸುವ ಘಟಕ ಪರೀಕ್ಷೆ ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ, ಹಾಗೂ ಸರಣಿ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಡೆಸುವುದರ ಮೂಲಕ ಪರೀಕ್ಷೆಯಲ್ಲಿ ನಕಲು ತಡೆದು ಗುಣಮಟ್ಟದ ಫಲಿತಾಂಶ ಬರುವಂತೆ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ.
* ವಿದ್ಯಾರ್ಥಿಗಳ ಹಾಜರಾತಿ ಮತ್ತು ಕಲಿಕೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲು ವಿದ್ಯಾರ್ಥಿಗಳ ಪೋಷಕರು ಮತ್ತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳ ಸಭೆಯನ್ನು ಕಾಲಕಾಲಕ್ಕೆ ಆಯೋಜನೆ ಮಾಡಿ, ಪರೀಕ್ಷೆಯಲ್ಲಿ ನಕಲು ಮಾಡುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. ಜೊತೆಗೆ ಪರೀಕ್ಷೆಯಲ್ಲಿ ನಕಲು ತಡೆಯಲು ಶಾಲೆ ಮತ್ತು ಇಲಾಖೆ ಹಂತದಲ್ಲಿ ಕೈಗೊಂಡಿರುವ ಕ್ರಮಗಳನ್ನು ಮನದಟ್ಟು ಮಾಡಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಹಕಾರ ಕೋರುವುದು. ಹಾಗೆಯೇ ಪರೀಕ್ಷೆಯಲ್ಲಿ ನಕಲು ಮಾಡದಿರುವ ಬಗ್ಗೆ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಮಾಡಿಸುವುದು. ಈ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಮಂಡಳಿಗೆ ಸಲ್ಲಿಸುವುದು. ಈ ವರದಿಯನ್ನು ಮಂಡಳಿಯ ಹಂತದಲ್ಲಿ ಕ್ರೋಢೀಕರಿಸಿ ಪ್ರತಿ ತಿಂಗಳು ಸಭೆಯನ್ನು ನಡೆಸಿ ಪರಿಶೀಲಿಸಲಾಗುವುದು.
ಶಾಲಾ ಹಂತದ ರೂಪಣಾತ್ಮಕ, ಸಂಕಲನಾತ್ಮಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಯಾವುದೇ ನಕಲು ನಡೆಯದಂತೆ ಕಟ್ಟುನಿಟ್ಟಾಗಿ ನಡೆಸುವುದು. ಶಿಕ್ಷಕರಿಗೆ ಕಾಲಕಾಲಕ್ಕೆ ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳನ್ನು ಸಮಯೋಚಿತವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮಾಡುವುದು. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಶಾಲೆ ಬಿಡದಂತೆ ಕ್ರಮವಹಿಸಿ, ಅಂತಹ ಮಕ್ಕಳಿಗೆ ನಿರಂತರವಾಗಿ ಶೈಕ್ಷಣಿಕ ಮಾರ್ಗದರ್ಶನ ನೀಡುವುದರ ಜೊತೆಗೆ ಆಪ್ತ ಸಮಾಲೋಚನೆಯನ್ನು ಮಾಡುವುದು. ಸದರಿ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಮಗುವಿನ ಕಲಿಕಾ ಮಟ್ಟವನ್ನು ತಿಳಿಸಿ, ಮಗುವಿನ ಕಲಿಕೆಯ ಬಗ್ಗೆ ನಿಗಾವಹಿಸುವಂತೆ ತಿಳಿಹೇಳುವುದು.
* ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯ ಶಿಕ್ಷಕರಿಗೆ ಪ್ರತಿ ಮಾಸಿಕ ಸಭೆಯನ್ನು ಆಯೋಜನೆ ಮಾಡುವುದು ಹಾಗೂ ಎಲ್ಲಾ ಪ್ರಮುಖ ವಿಷಯಗಳ ವಿಷಯ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುವುದು. ಹಾಗೆಯೇ ಪರೀಕ್ಷೆಯಲ್ಲಿ ನಕಲು ಮಾಡದಿರುವ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು.
* ನಕಲುರಹಿತವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಸಭೆಯನ್ನು ಆಯೋಜನೆ ಮಾಡುವುದು. ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ತಾಲ್ಲೂಕು ಮತ್ತು ಜಿಲ್ಲಾ ಹಂತದ ಇತರೆ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆಯಲು ಯೋಜನೆ ರೂಪಿಸುವುದು.
* ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ / ಮಾಹಿತಿ ನೀಡಲು ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸುವುದು. ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು/ ಗೊಂದಲಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಲಭ್ಯವಾಗುವಂತೆ ಕ್ರಮವಹಿಸುವುದು.
* ಜಿಲ್ಲಾ ಡಯಟ್ ಪ್ರಾಂಶುಪಾಲರು ತಮ್ಮ ಜಿಲ್ಲಾ ವ್ಯಾಪ್ತಿಯ ಪ್ರೌಢಶಾಲೆಗಳಿಗೆ ಭೇಟಿ ನೀಡಲು ಡಯಟ್ನ ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರುಗಳನ್ನು ನಿಯೋಜಿಸಿ ಶಿಕ್ಷಕರು ಬೋಧಿಸುವ ಪಾಠ ವೀಕ್ಷಣೆ ಮಾಡುವುದರ ಜೊತೆಗೆ ತರಗತಿ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳ ಕಲಿಕಾ ಮಟ್ಟವನ್ನು ಖಾತರಿಪಡಿಸಿಕೊಳ್ಳುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಸುಧಾರಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತೆ ಕ್ರಮವಹಿಸುವುದು.
SSLC ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚು ಅಂಕ ಗಳಿಸಲು ಈ ಸಲಹೆಗಳನ್ನು ಫಾಲೋ ಮಾಡಿ..!
ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಎಕ್ಸಾಮ್ ಮುಂದಿನ ಮಾರ್ಚ್ ತಿಂಗಳಾಂತ್ಯದಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಆಸೆ ಇದ್ದವರು, ಈ ಸಲಹೆಗಳನ್ನು ಫಾಲೋ ಮಾಡಿರಿ.
ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಎಕ್ಸಾಮ್ಗೆ ಇನ್ನು 5 ತಿಂಗಳು ಮಾತ್ರವೇ ಬಾಕಿ ಇವೆ. ದಿನಗಳು ಹೋಗುವುದು ವಿದ್ಯಾರ್ಥಿಗಳಿಗೆ ಆಗಲಿ, ಪೋಷಕರಿಗೆ ಆಗಲಿ ಅಷ್ಟು ಗಮನಕ್ಕೆ ಬರುವುದಿಲ್ಲ. ಆದರೆ ಪರೀಕ್ಷೆಗೆ ಇನ್ನೆರಡು ತಿಂಗಳು ಮಾತ್ರವೇ ಇರುವುದು ಎಂದಾಗ ಬಹುಸಂಖ್ಯಾತ ವಿದ್ಯಾರ್ಥಿಗಳು, ಎಚ್ಚೆತ್ತುಕೊಳ್ಳುವುದು ಸರ್ವೇ ಸಾಮಾನ್ಯ. ಅದರೆ ನಮ್ಮ ಇಂದಿನ ಲೇಖನದಿಂದ ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆ ತಯಾರಿಗೆ ಎಚ್ಚೆತ್ತುಕೊಳ್ಳುವಲ್ಲಿ ಸಂಶಯವಿಲ್ಲ ಎಂದು ಭಾವಿಸುತ್ತೇವೆ. ನೀವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಲೇಬೇಕು ಎಂದುಕೊಂಡಲ್ಲಿ ತಯಾರಿಯ ವಿಧಾನದಲ್ಲಿಯೂ ಗಮನಹರಿಸಬೇಕಾಗುತ್ತದೆ. ಸಮಯ ನಿರ್ವಹಣೆಯಲ್ಲಿಯೂ ಗಮನಹರಿಸಬೇಕಾಗುತ್ತದೆ. ಆದ್ದರಿಂದ ನೀವು ಟಾಪ್ ಅಂಕಗಳನ್ನು ಗಳಿಸಲು ಇಂದಿನ ಲೇಖನದ ಸಲಹೆಗಳನ್ನು ಫಾಲೋ ಮಾಡಿರಿ.
ಈಗಾಗಲೇ ಎಸ್ಎಸ್ಎಲ್ಸಿ ತರಗತಿ ಬೋಧನೆಗೆ ಅರ್ಧವರ್ಷ ಕಳೆದಿದೆ. ಇಷ್ಟು ದಿನ ನೀವು ಪಡೆದ ಬೋಧನೆಯಲ್ಲಿ ಏನೆಲ್ಲ ಪಠ್ಯಕ್ರಮ (ಅಧ್ಯಾಯಗಳು, ಪದ್ಯಗಳು) ಇದೆ ಎಂದು ನೆನೆಸಿಕೊಂಡಲ್ಲಿ, ಎಷ್ಟೋ ವಿಷಯಗಳು ಮರೆತಿರಬಹುದು. ಆದ್ದರಿಂದ ಒಮ್ಮೆ ಎಲ್ಲ ವಿಷಯಗಳ ಪಠ್ಯಕ್ರಮಗಳನ್ನು ಆಗಾಗ ಓದಿಕೊಳ್ಳಿ. ನೀವು ಆ ಅಧ್ಯಾಯಗಳ ಹೆಸರಿನ ಮೇಲೆ ಕಣ್ಣಾಡಿಸಿದಾಗಲೆಲ್ಲ, ಆ ಪಠ್ಯದ ಬೋಧನೆ, ವಿಷಯಗಳೆಲ್ಲ ಒಮ್ಮೆ ನಿಮಗೆ ನೆನಪಿಗೆ ಬರಬೇಕು. ಆಗ ಮಾತ್ರ ನಿಮ್ಮ ಅಧ್ಯಯನ, ಓದು ಪರಿಣಾಮಕಾರಿಯಾಗಿದೆ ಎಂದರ್ಥ. ಒಂದು ವೇಳೆ ನೆನಪಿಗೆ ಬರದಲ್ಲಿ ಸರಿಯಾಗಿ ಓದಿಕೊಂಡಿಲ್ಲ ಎಂದರ್ಥ.
ಶಿಕ್ಷಕರು ಎಲ್ಲ ಪಠ್ಯಗಳನ್ನು ಪಾಠ ಮಾಡಿ ಮುಗಿಸಲಿ, ಆನಂತರದಲ್ಲಿ ಒಂದು ಕಡೆಯಿಂದ ನೋಟ್ಸ್ ಓದಿಕೊಳ್ಳೋಣ ಎಂದು ಕಾಯದಿರಿ. ಈಗಾಗಲೇ ನೀವು ಕೇಳಿರುವ ಪಾಠಗಳನ್ನು, ಪಡೆದಿರುವ ನೋಟ್ಸ್ಗಳನ್ನು ಓದಲು ಇಂದಿನಿಂದಲೇ ಆರಂಭಿಸಿ. ಪರೀಕ್ಷೆಗೆ ಹೆಚ್ಚು ದಿನಗಳಿವೆ ಎಂದು ತಯಾರಿ ಮುಂದೂಡಬೇಡಿ.
ನೀವು ಕನ್ನಡ ಮಾಧ್ಯಮದಲ್ಲೇ ಓದುವವರಾಗಿರಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲೇ ಓದುವವರಾಗಿರಿ. ಆದರೆ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಓದುವುದು ಸೂಕ್ತ. ಕಾರಣ ಗಣಿತ ಹಾಗೂ ವಿಜ್ಞಾನದಲ್ಲಿ ಲೆಕ್ಕ, ಸೂತ್ರಗಳು, ಸಮೀಕರಣಗಳು, ಬಿಡಿಸಬೇಕಾದ ಸಮಸ್ಯೆಗಳು ತೀರ ಇರುತ್ತವೆ. ಇವುಗಳನ್ನು ಅಭ್ಯಾಸ ಮಾಡದೇ ಸುಮ್ಮನೇ ಓದಿದರೆ ಖಂಡಿತ ನೆನಪಿಗೆ ಬರುವುದಿಲ್ಲ. ಇಂಗ್ಲಿಷ್ನಲ್ಲೂ ಹಾಗೆಯೇ. ನೀವು ಓದುವ ಜತೆಗೆ- ವ್ಯಾಕರಣ, ಲೆಟರ್ ರೈಟಿಂಗ್, ಪ್ಯಾಸೇಜ್, ಇವುಗಳನ್ನು ಬರೆದು ಬರೆದು ಕಲಿಯಬೇಕಾಗಿದೆ. ಅಲ್ಲದೇ ಕರ್ನಾಟಕ ಅಭ್ಯರ್ಥಿಗಳಂತು ಅದರಲ್ಲೂ ಗ್ರಾಮೀಣ ಭಾಗದವರು ಇಂಗ್ಲಿಷ್ ಪದಗಳ ಅರ್ಥಗಳನ್ನು ತಿಳಿದು ಹೆಚ್ಚು ಕಲಿಯಬೇಕಾಗಿರುತ್ತದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ವಿಷಯಗಳಿಗೂ ಸಹ ಗೈಡ್ ಎಂದು ಖರೀದಿಗೆ ಲಭ್ಯವಿದೆ. ಆದರೆ ಮೊದಲು ನೀವು ಹೆಚ್ಚು ಬೋರ್ಡ್ ನಿಗದಿಪಡಿಸಿರುವ ಪಠ್ಯ ಪುಸ್ತಕದ ಮೇಲೆ ಅವಲಂಭಿತರಾಗಿರಬೇಕು. ಅದನ್ನೇ ಹೆಚ್ಚು ಓದಿಕೊಳ್ಳಬೇಕು. ಇದರಲ್ಲಿ ನೀಡುವ ಅಭ್ಯಾಸಗಳನ್ನು ಮಾಡುವುದು ಉತ್ತಮ. ಕರ್ನಾಟಕ ಎಸ್ಎಸ್ಎಲ್ಸಿ ಪಠ್ಯಕ್ರಮದ ಮೇಲೆ ಹೆಚ್ಚು ಗಮನಹರಿಸಿ ಓದಬೇಕು. ಇದರ ಆಧಾರದಲ್ಲಿಯೇ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದನ್ನು ಮರೆಯದಿರಿ.
ಎಷ್ಟು ಸಾಧ್ಯವೋ ಅಷ್ಟು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಬಿಡಿಸುವುದರಿಂದ ನಿಮ್ಮ ನೆನಪಿನ ಶಕ್ತಿ, ನೀವು ಓದಿರುವ ವಿಷಯಗಳು ಎಷ್ಟು ನೆನಪಿದೆ, ಯಾವುದು ಅತಿ ಮುಖ್ಯ ಈ ಎಲ್ಲದಕ್ಕೂ ಉತ್ತರಗಳನ್ನು ಕಂಡುಕೊಳ್ಳಬಹುದಾಗಿದೆ.
ನಿಮ್ಮ ಶಿಕ್ಷಕರು ಹೇಳಿದ ಹಾಗೂ ಪ್ರಶ್ನೆ ಪತ್ರಿಕೆಗಳಿಂದ ತಿಳಿದ ಅತಿ ಮುಖ್ಯ ಟಾಪಿಕ್ಗಳನ್ನು ಹೆಚ್ಚು ಬಾರಿ ಕೇವಲ ಓದುವುದಕ್ಕಿಂತ, ಬರೆದು ಬರೆದು ಕಲಿಯಿರಿ. ಆಗ ಮಾತ್ರ ಬೇಗ ನೆನಪಿಗೆ ಬರುತ್ತದೆ. ಕೇವಲ ಕಂಠಪಾಠಕ್ಕೆ ಸೀಮಿತವಾಗಬೇಡಿ. ಬರೆದು ಕಲಿಯುವುದರಿಂದ ಕೇವಲ ಪರೀಕ್ಷೆಗೆ ಮಾತ್ರವಲ್ಲದೇ ನಂತರವು ಸಹ ನಿಮ್ಮ ನೆನಪಿನಲ್ಲಿ ಈ ವಿಷಯಗಳಿರುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಜ್ಞಾನ ಸಹಾಯವಾಗುತ್ತದೆ.
ಎಸ್ಎಸ್ಎಲ್ಸಿ ಪರೀಕ್ಷೆ ಅಂಕಗಳು ನಿಮ್ಮ ಮುಂದಿನ ವಿದ್ಯಾಭ್ಯಾಸದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಆಯ್ಕೆ ಮಾಡುವ ವಿಷಯದಿಂದ ಹಿಡಿದು ಕಾಲೇಜಿನವರೆಗೆ, ಆರ್ಥಿಕ ವ್ಯವಸ್ಥೆಯ ಮೇಲೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದ ಬಹುಮುಖ್ಯ ಗ್ರೌಂಡ್ವರ್ಕ್ ಎಂದರೆ ಉತ್ತಮ ಪ್ಲಾನ್ ಮಾಡಿ ಓದುವುದಾಗಿದೆ. ಅದರಲ್ಲಿ ಪರೀಕ್ಷೆಗೆ ಒಂದೆರಡು ತಿಂಗಳು ಮುಂಚೆಯೇ ಪಠ್ಯಕ್ರಮದ ಎಲ್ಲ ಅಧ್ಯಾಯಗಳನ್ನು ಓದಿ, ಕಲಿತು ಮುಗಿಸುವುದು. ಈ ಓದಿನ ನಡುವೆ ಶಾಂತವಾಗಿ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಓದಿರಿ. ಜತೆಗೆ ವಿಶ್ರಾಂತಿ ಪಡೆದು ಓದಿರಿ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೀವು ಹೆಚ್ಚು ಅಂಕಗಳಿಸಬೇಕು ಎಂದಲ್ಲಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಬೇಕು ಎಂದಲ್ಲಿ, ಓದುವ ಸ್ಥಳದ ಆಯ್ಕೆಯೂ ಬಹುಮುಖ್ಯ. ಆ ಸ್ಥಳ ನಿಶಬ್ಧವಾಗಿರಲಿ. ನೀವು ಓದುವಾಗ ಯಾರು ಸಹ ಆಗಾಗ ನಿಮ್ಮನ್ನು ಮಾತನಾಡಿಸಿ ತೊಂದರೆ ಕೊಡುವ ಸ್ಥಳ ಇದಾಗಿರಬಾರದು. ಅಲ್ಲದೇ ಓದುವ ಸ್ಥಳದಲ್ಲಿ ಬುಕ್ಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಿ. ಆ ಪ್ರದೇಶಕ್ಕೆ ನೀವು ಸದಾ ಹೋಗಬೇಕು ಎನಿಸುವಷ್ಟು ಪ್ರಶಾಂತ ಸ್ಥಳ, ಶುಚಿಯಾದ ಸ್ಥಳ, ವ್ಯವಸ್ಥಿತ ಸ್ಥಳ ಆದಾಗಿರಲಿ.
ನೀವು ಪರೀಕ್ಷೆ ಬರೆಯಲಿರುವ ಪ್ರತಿ ಪತ್ರಿಕೆಗೆ ಸಮಯ ನಿಗದಿಪಡಿಸಿ. ನಿಮಗೆ ಹೆಚ್ಚು ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಸಮಯ ನಿಗದಿಪಡಿಸಿ ಓದಿರಿ. ಸೂಕ್ತ ಟೈಮ್ ಟೇಬಲ್ ಹಾಕಿಕೊಂಡು ಓದಿರಿ. ಕಷ್ಟ ಎನಿಸುವ ಟಾಪಿಕ್ಗಳನ್ನು, ಅರ್ಥವಾಗದ ಟಾಪಿಕ್ಗಳನ್ನು ಶಿಕ್ಷಕರಲ್ಲಿ, ಸಹಪಾಠಿಗಳಲ್ಲಿ ಕೇಳಿ ತಿಳಿದುಕೊಳ್ಳಿ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳಿಸುವ ನಿಮ್ಮ ಗುರಿಗೆ, ನಿಮ್ಮ ಸ್ವಯಂ ಅಧ್ಯಯನ ಮಾರ್ಗವೇ ಅಂತಿಮ ಪರಿಹಾರ ಹಾಗೂ ಮಾರ್ಗೋಪಾಯಗಳು. ಅಂದರೆ ನಿಮ್ಮ ಅಧ್ಯಯನ ತಂತ್ರಗಾರಿಕೆ, ನೀವು ನೀಡುವ ಸಮಯ, ನೀವು ಓದುವ ವಿಧಾನ, ಇವುಗಳೇ ನಿಮಗೆ ಪರಿಹಾರಗಳು. ಇವು ಬಿಟ್ಟು ಬೇರೆ ಯಾವುದೇ ಸುಲಭ ಮಾರ್ಗ ಹೆಚ್ಚು ಅಂಕಗಳಿಸಲು ಇಲ್ಲ. ಆದ್ದರಿಂದ ಪ್ರತಿ ದಿನವು ಸಹ ನಿಮ್ಮ ಸಣ್ಣ ಸಣ್ಣ ಗುರಿಗಳನ್ನು ತಲುಪಿ, ಉತ್ತಮವಾಗಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗಿದೆ.
ಪರೀಕ್ಷೆಗೆ ಕನಿಷ್ಠ ಇನ್ನೊಂದೆ ತಿಂಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ನೀವು ಓದಿದ, ಕಲಿತ ಎಲ್ಲವನ್ನು ಪುನರಾವರ್ತನೆ ಮಾಡಬೇಕು. ಓದಿದನ್ನು ಪುನರಾವರ್ತನೆ ಮಾಡದಿದ್ದಲ್ಲಿ ಅದೆಷ್ಟೋ ವಿಷಯಗಳು ಮರೆತು ಹೋಗುತ್ತವೆ. ಈ ಸಂದರ್ಭದಲ್ಲಿ ಸಂಶಯಗಳು ಇರುವ ಟಾಪಿಕ್ಗಳು ಸಿಗುತ್ತವೆ. ಅವುಗಳನ್ನು ಸಹ ಕ್ಲಿಯರ್ ಮಾಡಿಕೊಳ್ಳಲು ಈ ಪುನರಾವರ್ತನೆ ಸಹಾಯವಾಗುತ್ತದೆ. ಪುನರಾವರ್ತನೆಗೆ ಸಮಯ ನೀಡುವುದನ್ನು ಯಾರು ಸಹ ಮಿಸ್ ಮಾಡಲೇಬಾರದು.
ಈ ವರ್ಷ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಗೆ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ನಡೆಯಿತು. ಕರ್ನಾಟಕ SSLC ಉತ್ತರ ಕೀಗಳನ್ನು ಏಪ್ರಿಲ್ 17, 2023 ರಂದು ಪ್ರಕಟಿಸಲಾಗಿದೆ. ಕರ್ನಾಟಕ SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21, 2023 ರಂದು ಪ್ರಾರಂಭವಾಯಿತು. ಕೆಳಗಿನ ಎಲ್ಲಾ ಇತ್ತೀಚಿನ ನವೀಕರಣಗಳನ್ನು ಅನುಸರಿಸಿ.

No comments:
Post a Comment