ಬೆಂಗಳೂರು, ಅಕ್ಟೋಬರ್ 25: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವೇತನ, ಭತ್ಯೆಗಳ ಏರಿಕೆಗಳ ಬೇಡಿಕೆಗಳ ಜೊತೆಗೆ ಆಡಳಿತ ಸುಧಾರಣೆ ಕುರಿತು ಸಹ ಕೆಲವು ಸಲಹೆಗಳನ್ನು ನೀಡಿದೆ.
ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದ ಅಂಶಗಳು ಎಂಬ ಅಡಿ ಬರಹದಲ್ಲಿ ಹಲವು ಸಲಹೆಗಳನ್ನು ನೀಡಿದೆ.
ಈ ಸಲಹೆಗಳಲ್ಲಿ ವೇತನ ಆಯೋಗ ಯಾವ-ಯಾವ ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದೆ? ಎಂದು ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಯನ್ನು ಕರ್ನಾಟಕ ಆಡಳಿತ ಸೇವೆಯ ಮಾದರಿಯಲ್ಲಿಯೇ ಗುರುತಿಸಬೇಕು. ಕೇಂದ್ರ ಸಚಿವಾಲಯದಲ್ಲಿ ಹಾಗೂ ನಮ್ಮ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಹಿರಿಯ ಸಹಾಯಕ ಹುದ್ದೆಯ ಪದನಾಮವು ಸಹಾಯಕ ಶಾಖಾಧಿಕಾರಿಯಾಗಿದ್ದಲ್ಲದೇ, ಅದೊಂದು ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ಪದನಾಮವನ್ನು 'ಸಹಾಯಕ ಶಾಖಾಧಿಕಾರಿ' ಎಂದು ಬದಲಾಯಿಸಿ ಕೇಂದ್ರ ಹಾಗೂ ನೆರೆ ರಾಜ್ಯಗಳಂತೆ ಗ್ರೂಪ್ 'ಬಿ' ನಾನ್ ಗೆಜೆಟೆಡ್ ಹುದ್ದೆಯನ್ನಾಗಿ ಉನ್ನತೀಕರಿಸುವುದು ಸುಗಮ ಆಡಳಿತಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ ಎಂದು ಹೇಳಿದೆ.
ಸಚಿವಾಲಯ ಸೇವೆಗೆ ಪ್ರತ್ಯೇಕ ನೇಮಕಾತಿ ಆಗಬೇಕು. ಆರಂಭಿಕ ಹುದ್ದೆಗಳಾದ ಕಿರಿಯ ಸಹಾಯಕ ಮತ್ತು ಸಹಾಯಕ ಹುದ್ದೆಗಳಿಗೆ ಸಚಿವಾಲಯ ಸೇವೆಗೆ ಸೇರ್ಪಡೆಯಾಗುವ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷಾ ಪಠ್ಯಗಳನ್ನು ರೂಪಿಸಬೇಕು. ಮುಂದುವರೆದು ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ಪದನಾಮವನ್ನು ಕ್ರಮವಾಗಿ ಹಿರಿಯ ಸಚಿವಾಲಯ ಸಹಾಯಕ (Senior Secretariat Assistant) ಮತ್ತು ಕಿರಿಯ ಸಚಿವಾಲಯ ಸಹಾಯಕ (Junior Secretariat Assistant) ಆಗಿ ಬದಲಾಯಿಸಬೇಕು ಎಂದು ಸಲಹೆ ನೀಡಿದೆ.
ಸಚಿವಾಲಯ ಸೇವೆಯು ರಾಜ್ಯ ಸರ್ಕಾರದ ಸೇವೆಗಳಲ್ಲಿಯೇ ಅತ್ಯಂತ ಜವಾಬ್ದಾರಿಯುತ ಹಾಗೂ ಮಹತ್ವಪೂರ್ಣವಾದ ಸೇವೆಯಾಗಿರುವುದರಿಂದ ಸಚಿವಾಲಯ ಸೇವೆಯ ಎಲ್ಲಾ ವೃಂದಗಳಿಗೂ ಪ್ರತ್ಯೇಕ ವೇತನ ಶ್ರೇಣಿಗಳು ನಿಗದಿಯಾಗಬೇಕು. ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯು ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸರಿಸಮವೆಂದು ಪರಿಗಣಿಸಿ, ಅಸಿಸ್ಟೆಂಟ್ ಕಮೀಷನರ್ ವೇತನ ಶ್ರೇಣಿಯನ್ನು ಅಧೀನ ಕಾರ್ಯದರ್ಶಿ ಹುದ್ದೆಗಳಿಗೆ ನೀಡಬೇಕು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.
ಅಧೀನ ಕಾರ್ಯದರ್ಶಿ ಹುದ್ದೆಯ ಆರಂಭಿಕ ವೇತನ ಶ್ರೇಣಿ ಹಾಗೂ ಉಪ ಕಾರ್ಯದರ್ಶಿ ಹುದ್ದೆಯ ಆರಂಭಿಕ ವೇತನ ಶ್ರೇಣಿಗೆ ಸರಿಸುಮಾರು 4 ಹಂತಗಳ ವ್ಯತ್ಯಾಸವಿದ್ದು, ಅಧೀನ ಕಾರ್ಯದರ್ಶಿ ವೇತನ ಶ್ರೇಣಿಯನ್ನು ಒಂದು ಹಂತಕ್ಕೆ ಹೆಚ್ಚಿಸಬೇಕು. ಶಾಖಾಧಿಕಾರಿ ಹಾಗೂ ಅದಕ್ಕೂ ಮೇಲ್ಪಟ್ಟ ಅಂದರೆ ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಹಂತದ ಹುದ್ದೆಗಳಿಗೆ ಗರಿಷ್ಟ 5 ವರ್ಷಗಳಿಗೆ ಸೆಲೆಕ್ಷನ್ ಗ್ರೇಡ್ ಮುಂಬಡ್ತಿ ನೀಡುವಂತಾಗಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಪ್ರಸ್ತುತ ಸಚಿವಾಲಯದಲ್ಲಿ ಸೃಜಿಸಲಾಗಿರುವ ಹುದ್ದೆಗಳು ಮತ್ತು ಅವುಗಳ ಕಾರ್ಯಭಾರಗಳನ್ನು ಅನೇಕ ವರ್ಷಗಳಿಂದ ಪುನರ್ ವಿಮರ್ಶೆ ಮಾಡಿರುವುದಿಲ್ಲ. ಸಚಿವಾಲಯದ ಹಲವಾರು ಇಲಾಖೆಗಳಲ್ಲಿ ಕಾರ್ಯಭಾರದ ತೀವ್ರ ಒತ್ತಡವಿದ್ದು, ಹೊರಗುತ್ತಿಗೆ ಆಧಾರದ ನೌಕರರು, ಗುತ್ತಿಗೆ ಆಧಾರದ ನೌಕರರು, ನಿವೃತ್ತ ಅಧಿಕಾರಿಗಳು ಕನ್ಸಟೆಂಟ್ಸ್ ಆಗಿ ಕಾರ್ಯ ನಿರ್ವಹಿಸುವುದು, ಮುಂತಾದ ಅವೈಜ್ಞಾನಿಕ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿಸುವ ಮೂಲಕ ಸರ್ಕಾರದ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ. ಈ ಪದ್ಧತಿಯಿಂದ ಸಚಿವಾಲಯದಲ್ಲಿ ಗೌಪ್ಯತೆಗೆ ಹಾಗೂ ಘನೆತೆಗೆ ಧಕ್ಕೆ ಅಗುತ್ತದೆ. ಈ ಹಿನ್ನಲೆಯಲ್ಲಿ ಈ ರೀತಿಯ ಅನಧಿಕೃತ ನೇಮಕಾತಿಗಳನ್ನು ಕೂಡಲೇ ಸ್ಥಗಿತಗೊಳಿಸಿ, ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳ ಸೃಜನೆಯಾಗಬೇಕು ಮತ್ತು ಕಾಲಮಿತಿಯಲ್ಲಿ ಈ ಹುದ್ದೆಗಳು ಭರ್ತಿಯಾಗಲು ಕ್ರಮವಹಿಸಬೇಕು.
ಸಚಿವಾಲಯದಲ್ಲಿರುವ ಹುದ್ದೆಗಳ ಸೃಜನೆಯು 1993ರ ಸುಮಾರಿನದ್ದಾಗಿದ್ದು, ಆ ಸಂದರ್ಭದಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯು ಸುಮಾರು 3 ಕೋಟಿ ಇದ್ದು, ಪ್ರಸ್ತುತ ಕರ್ನಾಟಕದಲ್ಲಿನ ಜನಸಂಖ್ಯೆಯು ಸುಮಾರು 7 ಕೋಟಿ ಇರುವುದರಿಂದ ಬದಲಾದ ಸಂದರ್ಭದಲ್ಲಿ ಸರ್ಕಾರವು ಜಾರಿಗೆ ತರುವ ಅನೇಕ ಸಾಮಾಜಿಕ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಸುಧಾರಣೆಗಳಿಂದ ಹೆಚ್ಚುವರಿಯಾಗಿ ಮಾಹಿತಿ ಹಕ್ಕು ಕಾಯ್ದೆ, ಸಕಾಲ, ರೇರಾ, ಲೆಕ್ಕಪತ್ರ-2, ಕೌಶಲ್ಯಾಭಿವೃದ್ಧಿ ಮುಂತಾದ ಇಲಾಖೆಗಳು ಸೃಜನೆಗೊಂಡಿದ್ದು, ಈ ಇಲಾಖೆಗಳಿಂದ ಇತರೆ ಎಲ್ಲಾ ಇಲಾಖೆಗಳ ಕಾರ್ಯಕ್ಷೇತ್ರಗಳು ವಿಸ್ತಾರಗೊಂಡಿದ್ದು, ಸದರಿ ಇಲಾಖೆಗಳ ಮೇಲೆ ಅಧಿಕ ಒತ್ತಡ ಉಂಟಾಗಿರುತ್ತದೆ. ಈ ಕಾರಣಗಳಿಂದ ಸಚಿವಾಲಯದ ಹಿಂದಿನ ವೃಂದ ಬಲವನ್ನು ಹೆಚ್ಚಿಸುವುದು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.
No comments:
Post a Comment