ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ನಿಗದಿತ ಮಾನದಂಡಗಳಿಗೆ ಅರ್ಹರಾದ ಕರ್ನಾಟಕ ವೃಂದದ ಎಂಟು ಜನ ಐಎಎಸ್, ಏಳು ಜನ ಐಪಿಎಸ್ ಹಾಗೂ ಒಬ್ಬ ಐಎಫ್ಎಸ್ ಅಧಿಕಾರಿಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಸೌಲಭ್ಯ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಎನ್ಪಿಎಸ್ ನೌಕರರಿಗೆ ಆಸೆ ಚಿಗುರಿದೆ.
ಐಎಎಸ್ ಅಧಿಕಾರಿಗಳಾದ ಡಾ.ಎಂ.ಎನ್. ಅಜಯ್ ನಾಗಭೂಷಣ್, ವಿ.ಅಶೋಕ್ಕುಮಾರ್, ಡಾ.ಎನ್.ವಿ. ಪ್ರಸಾದ್, ಸಮೀರ್ ಶುಕ್ಲ, ಡಾ.ಕೆ.ಜಿ.ಜಗದೀಶ್, ವಿಪುಲ್ ಬನ್ಸಲ್, ಡಾ.ಎಂ.ಟಿ.ರಜು, ತುಳಸಿ ಮದ್ದಿನೇನಿ, ಐಪಿಎಸ್ ಅಧಿಕಾರಿಗಳಾದ ಲಾಬೂರಾಮ್, ಸಂದೀಪ್ » ಪಾಟೀಲ್, ಡಾ.ಪಿ.ಎಸ್.ಹರ್ಷ, ವಿಕಾಶ್ ಕುಮಾರ್ ವಿಕಾಶ್, ಅಭಿಷೇಕ್ ಗೋಯಲ್, ರಮಣ್ ಗುಪ್ತಾ, ಕೌಶಲೇಂದ್ರ ಕುಮಾರ್ ಹಾಗೂ ಐಎಫ್ಎಸ್ ಅಧಿಕಾರಿ ಸುನಿಲ್ ಪನ್ವರ್ ಅವರಿಗೆ ಒಪಿಎಸ್ ಅನ್ವಯಿಸಲಾಗಿದ್ದು, ಈ ಅಧಿಕಾರಿಗಳ ಹೊಸ ಪಿಂಚಣಿ ಯೋಜನೆ, (ಎನ್ಪಿಎಸ್) ಖಾತೆಯು 2024 ಮಾ.31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಭಾರತೀಯ ಸೇವಾ ನಿಯಮಾವಳಿ ಪ್ರಕಾರ ಖಾಲಿಯಿರುವ ಹುದ್ದೆಗಳಿಗೆ ನೇಮಕ ಅಧಿಸೂಚನೆಯು ಎನ್ಪಿಎಸ್ ಜಾರಿ ಮುನ್ನ ಪ್ರಕಟವಾಗಿ 2004 ಜ.1ರ ಮುನ್ನ ಅಥವಾ ನಂತರ ಎನ್ಪಿಎಸ್ನಡಿ ಸೇವೆಗೆ ಸೇರಿದ ಭಾರತೀಯ ಸೇವೆ ಅಧಿಕಾರಿಗಳಿಗೆ ಈ ಒಪಿಎಸ್ ಸೌಲಭ್ಯ ಕಲ್ಪಿಸಲಾಗಿದೆ.
ಜತೆಗೆ 2003, 2004ರ ನಾಗರಿಕ ಸೇವಾ ಪರೀಕ್ಷೆ ಮುಖೇನ ಭಾರತೀಯ ಸೇವೆ ಮತ್ತು 2003ರ ಭಾರತೀಯ ಅರಣ್ಯ ಸೇವೆ ಪರೀಕ್ಷೆ ಮೂಲಕ ಆಯ್ಕೆಯಾದವರಿಗೆ ಒಂದು ಬಾರಿಗೆ ಒಪಿಎಸ್ ಅನ್ವಯಿಸಲು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೂಚಿಸಿದೆ. ಅದರಂತೆಯೇ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯ ಎನ್ಪಿಎಸ್ ನೌಕರರ ಸಂಘದ ಸದಸ್ಯರು ಒಪಿಎಸ್ಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಭರವಸೆ ನೀಡಿತ್ತು. ಇದೀಗ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ಒಪಿಎಸ್ ಜಾರಿಯಾಗಿದ್ದು, ನೌಕರರ ಬಗ್ಗೆಯೂ ಸರ್ಕಾರ ಇದೇ ನಿರ್ಧಾರಕ್ಕೆ ಬರಬಹುದೆಂಬ ಆಶಾಭಾವನೆ ಮೂಡಿದೆ.



No comments:
Post a Comment